
ದುಡ್ಡು ಕಾಸಿನ ವಿಷಯದ ಬಗ್ಗೆ ಹೇಳುವುದಾದರೆ, ಇದು ನಿವೃತ್ತಿಗೆ ಅಣಿಯಾಗುವ ಸಮಯ, ಮನುಷ್ಯ ಐವತ್ತೆಂಟಕ್ಕೆ ನಿವೃತ್ತಬಾಗಬೇಕು. ಆದರೆ ನಿನ್ನಂಥವನು ಯಾವತ್ತಿಗಾದರೂ ನಿವೃತ್ತನಾಗುವುದು ಸಾಧ್ಯವೇ ರವೀ, ಅಂತ ಗೆಳೆಯರು ತಮಾಷೆ ಮಾಡುತ್ತಾರೆ. ವೃತ್ತ ಪತ್ರಿಕೆಯವರಿಗೆ ನಿವೃತ್ತಿ ಇರುವುದಿಲ್ಲ ಎಂಬ ಮಾತು ಸತ್ಯ.
ಈ ವರ್ಷ ಒಂದು ವೋಕ್ಸ್ ವ್ಯಾಗನ್ ಕಾರು ಮತ್ತು ಆಫೀಸಿನ ಬಳಕೆಗಾಗಿ ಒಂದು ಮಾರುತಿ ಓಮ್ನಿ ಖರೀದಿಸಿದೆ. ಮಗಳ ಸೀಮಂತಕ್ಕೆ ಅಂತ ಖರೀದಿಸಿದ ಚಿನ್ನದ ಬೆಲೆ ಒಂದೂವರೆ ಲಕ್ಷ ರುಪಾಯಿ ಯಷ್ಟಾಯಿತು. ಇಂಗ್ಲೆಂಡಿನಿಂದ ಹಿಂತಿರುಗಿದ ನನ್ನ ಮಗ ಕರ್ಣ ತಾನೊಂದು ವೋಕ್ಸ್ ವ್ಯಾಗನ್ ಕಾರು ಖರೀದಿಸಿದ್ದಾನೆ. ಉಳಿದಂತೆ, ರಿಸೆಷನ್ ಕಾರಣವೋ ಏನೋ, ಹೆಚ್ಚಿನ ಖರೀದಿಗಳಾಗಿಲ್ಲ. ಹಾಗೆ ಹೇರಳವಾಗಿ ನಾನು ಖರೀದಿಸಿರುವ ವಸ್ತುಗಳೆಂದರೆ ಟೀವಿ ಕಾರ್ಯಕ್ರಮಗಳಿಗಾಗಿ ಹೊಸ ಷರ್ಟುಗಳು, ಪುಸ್ತಕಗಳು ಮತ್ತು ಸಂಗೀತದ ಸಿ.ಡಿ ಗಳು. ಆಸ್ತಿ ಖರೀದಿಯ ಗೋಜಿಗೆ ಈ ಸಲ ಹೋಗಲಿಲ್ಲ.
ಪದ್ಮನಾಭ ನಗರದ ’ಅಮ್ಮ’ ಮನೆ ಹಾಗೂ ಒಂದು ಫ್ಲಾಟ್ ಭಾವನಾಗೆ ಉಡುಗೊರೆಯಾಗಿ ಕೊಟ್ಟಿದ್ದೇನೆ. ಶೇಷಾದ್ರಿಪುರದ ಮನೆಯನ್ನು ಚೇತನಾಗೆ ಉಡುಗೊರೆಯಾಗಿ ಕೊಟ್ಟಿದ್ದೇನೆ. ಬನಶಂಕರಿಯ ಮನೆ ’ಅಮ್ಮೀಜಾನ್’ ಅವತ್ತಿಗೂ ಇವತ್ತಿಗೂ ಲಲಿತೆಯ ಸುಪರ್ದಿಯಲ್ಲಿದೆ. ನಾನು ಕುಳಿತು ಕೆಲಸ ಮಾಡುವ ಆಫೀಸು ಸ್ವಂತದ್ದು. ಇಲ್ಲಿ ಸುಮಾರು ಏಳು ಕಂಪ್ಯೂಟರ್ಗಳ ಖರೀದಿಯಾಗಿದೆ. ನಿವೇದಿತಾಳ ಮನೆಯೊಂದನ್ನು ನಾನು ಖರೀದಿಸಿದ್ದೇನೆ. ಬ್ಯಾಂಕಿನಲ್ಲಿ ಕೊಂಚ ಸಾಲವಿದೆ. ನನ್ನ ದುಡಿಮೆ ಅದನ್ನು ತೀರಿಸುತ್ತಿದೆ.
’ಹಾಯ್ ಬೆಂಗಳೂರ್!’ ಮತ್ತು ’ಓ ಮನಸೇ..’ ಎರಡೂ ಲಾಭದಲ್ಲಿದೆ. ಪ್ರತೀ ತಿಂಗಳು ಪತ್ರಿಕೆಯ ಸಿಬ್ಬಂದಿಗೆ ನಾನು ಕೊಡುವ ಸಂಬಳ ಐದು ಲಕ್ಷ ರುಪಾಯಿ. ಅತಿ ಹೆಚ್ಚಿನ ಸಂಬಳ ಪಡೆಯುತ್ತಿರುವಾಕೆ ನಿವೇದಿತಾ.
ನೀವೆಲ್ಲಕೊಟ್ಟ ಹಣದಿಂದ ನಾನು ಕಟ್ಟಿದ ಶಾಲೆ ’ಪ್ರಾರ್ಥನಾ’. ಇವತ್ತು ಅಲ್ಲಿ ೫೫೦೦ ಮಕ್ಕಳು ಓದುತ್ತಿದ್ದಾರೆ. ಸುಮಾರು ೩೦೦ ಜನ ಸಿಬ್ಬಂದಿಯವರಿದ್ದಾರೆ. ಅವರಿಗೆ ನಾವು ಪ್ರತಿ ತಿಂಗಳು ಕೊಡೆ ಮಾಡುವ ಸಂಬಳ ಹದಿನೇಳು ಲಕ್ಷ ರೂಪಾಯಿ. ನಾಲ್ಕು ಸ್ವಂತ ಕಟ್ಟಡಗಳಲ್ಲಿ, ಒಂದು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿರುವ ’ಪ್ರಾರ್ಥನಾ’ ತನ್ನ ಸಾಲ ತೀರಿಸಿಕೊಂಡು ಲಾಭದಲ್ಲಿ ನಡೆದಿದೆ. ಅದರ ಲಾಭವನ್ನೆಲ್ಲ ಶಾಲೆಯ ಮೇಲೆಯೇ ಮತ್ತೆ ತೊಡಗಿಸುವ ಸಂಪ್ರದಾಯ ಮುಂದುವರೆಸಿಕೊಂಡು ಬಂದಿದ್ದೇನೆ.
ನನ್ನಲ್ಲಿ ಕಪ್ಪು ಹಣವಿಲ್ಲ. ’ಪತ್ರಿಕೆ’ ಪ್ರಾರಂಭವಾದಾಗಿನಿಂದ ನಿಗದಿತವಾಗಿ ಆದಾಯ ತೆರಿಗೆ ತುಂಬುತ್ತಿದ್ದೇನೆ. ಪತ್ರಿಕೆಗಳು, ಟೀವಿ ಕಾರ್ಯಕ್ರಮ, ಪುಸ್ತಕ ಪ್ರಕಾಶನ ಇವುಗಳಿಂದ ಬರುವ ಲಾಭಕ್ಕೆ ಈ ಬಾರಿ ನಾನು ತುಂಬಿರುವ ಆದಾಯ ತೆರಿಗೆ ೫೨.೪೭ ಲಕ್ಷ ರುಪಾಯಿಗಳು.
ನೀವು ಕೊಡುವ ಹಣದಲ್ಲೇ ’ಸೀತಾನದಿ ಸುರೇಂದ್ರನ ಹೆಸರಿನ ಸ್ಕಾಲರ್ಷಿಪ್ ಯೋಜನೆ’ ಮುಂದುವರೆದಿದೆ. ಆ ಹಣದಲ್ಲಿ ಕೆಲವು ಬಡ ಪ್ರತಿಭಾವಂತ ಮಕ್ಕಳು ಪಿ.ಯು.ಸಿ, ಬಿ.ಇ, ಎಂ.ಬಿ.ಬಿ.ಎಸ್, ಮುಂತಾದ ಕೋರ್ಸುಗಳಿಗೆ ಓದುತ್ತಿದ್ಧಾರೆ. ಅದೇ ಲಾಭದ ಹಣದಲ್ಲಿ ಕಿಡ್ನಿ ಕಾಯಿಲೆಯವರಿಗೆ, ಕ್ಯಾನ್ಸರ್ ರೋಗಿಗಳಿಗೆ, ಅನಾಥ ವೃದ್ದರಿಗೆ, ಎಚ್.ಐ.ವಿ ಸೋಂಕು ತಗುಲಿದವರಿಗೆ ಉಚಿತವಾಗಿ ಔಷಧಿ ಕೊಡಿಸುತ್ತಿದ್ದೇನೆ.
ಲೆಕ್ಕಾಚಾರದ ವಿಷಯದಲ್ಲಿ ನ್ನಿಂದ ಪೊರಪಾಟುಗಳಾಗಿರಬಹುದು. ಆದರೆ ಲೆಕ್ಕ ಪತ್ರದ ವಿಷಯದಲ್ಲಿ ಎಲ್ಲವೂ ನಿಸೂರು. ನಮ್ಮ ಸಂಸ್ಥೆಗಳ ಪ್ರತಿ ನೌಕರನಿಗೂ ಪ್ರಾವಿಡೆಂಟ್ ಫಂಡ್ ದೊರೆಯುತ್ತದೆ.
ನನಗೆ ದಕ್ಕುತ್ತಿರುವುದು: ಸಮಾಧಾನ.
-ಬೆಳಗೆರೆ
Posted by ravibelagere 




