ಈ ನೆನಪು ಇನ್ನು ಶಾಶ್ವತ

Photo0197

ಬೆಳಗೆರೆಯವರೊಂದಿಗೆ

ಕನಸುಗಳನ್ನು ಬೆನ್ನಟ್ಟಿ ಹೋಗುವುದೇ ಜೀವನ…ಈ ರೀತಿ ಆಸೆಯಿಂದ ಅರಸಿಹೋದ ಕನಸೊಂದು ನನಸಾದಾಗ..ನನಸಾದ ಆ ಕ್ಷಣದ ನೆನಪು ಉಳಿಯುವುದು ಚಿರಕಾಲ. ಬೆಳಗೆರೆಯವರನ್ನು ಮುಖತಃ ಭೇಟಿಯಾಗಬೇಕೆಂಬ ನನ್ನ ಹಂಬಲಕ್ಕೆ ಕನಸಿಗೆ ಕಡೆಗೂ ಕಾಲ ಒದಗಿಬಂದಿತ್ತು. ಆಗಸ್ಟ್ ೨೪ ರ ಸೋಮವಾರದಂದು ನನ್ನ ಜೀವನದ ಮರೆಯಲಾಗದ ದಿನ. ನಾನು ಸಾಮಾನ್ಯವಾಗಿ ಅದೃಷ್ಟದ ಸಂಖ್ಯೆಗಳನ್ನು ನಂಬುವುದಿಲ್ಲ. ಆದರೂ ಈ ೨೪ ನನ್ನ ಹಲವು ತಿರುವುಗಳಿಗೆ ಸಂತೋಷಗಳಿಗೆ ಸಾಕ್ಷಿಯಾಗಿದೆ. ನಾನು ವಿವಾಹವಾಗಿ, ನನ್ನ ಬಾಳ ಸಂಗಾತಿ, ಒಲುಮೆಯ ಗೆಳತಿ ಸುನಿತಾ ನನ್ನ ಬಾಳಿಗೆ ಬಂದ ದಿನ ಅಕ್ಟೋಬರ್‍ ೨೪, ಅಂತೆಯೇ ನನ್ನ ಜೀವದ ಗೆಳತಿಯಾಗಿ ತನ್ನ ಪುಟ್ಟ ಪುಟ್ಟ ಬೆರಗು ಕಣ್‌ಗಳೊಂದಿಗೆ ಈ ಭುವಿಗೆ ನನ್ನ ಮಗಳು ಬಂದಿದ್ದು ಜುಲೈ ೨೪, ಇನ್ನು ಈಗ ನಾ ಹೇಳ ಹೊರಟಿರುವ ದಿನ ಸಹಾ ಆಗಸ್ಟ್ ೨೪.

ಬೆಂಗಳೂರಿನ ಪದ್ಮನಾಭ ನಗರದ ಬೀದಿಯಲ್ಲಿ ನಡೆದು ಬರುತ್ತಿದ್ದವನಿಗೆ ಏನೋ ಆವೇಗ, ಮೊದಲ ಪ್ರೀತಿ ಹೇಳ ಹೊರಟಿರುವ, ತನ್ನ ಪ್ರಿಯತಮೆಗಾಗಿ ಬರೆದ ಪ್ರೇಮಪತ್ರವನ್ನು ಜೇಬಿನಲ್ಲಿರಿಸಿಕೊಂಡು ಪತ್ರವನ್ನು ನೀಡುತ್ತೇನೋ..ಇಲ್ಲವೋ ಒಂದೂ ತಿಳಿಯದೇ ನಿಧಾನವಾಗಿ ಸಾಗುತ್ತಿರುವ ಹುಡುಗನಂತೆ ಮನಸ್ಸು ಢವ ಢವ…ಸಣ್ಣಗಿನ ತುಂತುರು ಮಳೆ ನಿಧಾನವಾಗಿ ರಸ್ತೆಗಳನ್ನು ಕಟ್ಟಡಗಳನ್ನು ಆವರಿಸ ತೊಡಗಿತ್ತು. ಮಳೆ ತನ್ನೊಡನೆ ಹೊತ್ತು ತಂದ ತಂಗಾಳಿ ಎಂಥದೋ ಅಧ್ಬುತ ಹಿತವನ್ನು ನೀಡುತ್ತಿತ್ತು. ಈ ಸೋನೆ ಮಳೆ ಹಾಗೂ ತಂಗಾಳಿಗೆ ಸೋತ ಮನಸ್ಸು ನೆನಪುಗಳ ಬೆನ್ನೇರುತ್ತಿತ್ತು.  ಕೆಂಪು ಚೂಡಿದಾರ್‍ ಧರಿಸಿ, ಮೊಳದುದ್ದದ ಪುಸ್ತಗಗಳನ್ನು ಎದೆಗವಚಿಕೊಂಡು ಹೋಗುತ್ತಿದ್ದ ಅವಳ ನೆನಪು ಪದೇ ಪದೇ ಮೂಡುತ್ತಿತ್ತು. ಗಾಳಿಗೆ ಅತ್ತ ಇತ್ತ ಹೋಗುತ್ತಿದ್ದ ಅವಳ ಮುಂಗುರುಳ ಮೇಲಿನ ಅವಳ ಬೆರಳುಗಳು ನನ್ನನ್ನೇ ಕರೆದಂತೆ, ನಾ ಅವಳ ಹಿಂದೆಯೇ ಸಾಗುತ್ತಿದ್ದೆ. ನನ್ನಲ್ಲಿ ನೂರು ಮಾತು ಮನದಲ್ಲಿ ಹುಟ್ಟಿ ಗಂಟಲಲ್ಲೇ ಮೌನವಾಗುತ್ತಿತ್ತು…ಬೆಳ್ಳಂ ಬೆಳಗಿನ ಜಾವಕ್ಕೆ ಸೂರ್ಯನ ಎಳೆ ಕಿರಣಗಳಿಂದಲೇ ಜಳಕವಾಡಿ ಬಂದಂತಿದ್ದ ಅವಳ ಸೌಂದರ್ಯ ನನ್ನನ್ನು ಮತ್ತಷ್ಟು ಮೂಕನನ್ನಾಗಿಸುತ್ತಿತ್ತು..

ಹೀಗೆಯೇ ನೆನಪುಗಳೊಡನೆ ಮಾತಾಡಿಕೊಂಡು ಹೋಗುತ್ತಿದ್ದವನು ವಾಸ್ತವಕ್ಕೆ ಬಂದಿದ್ದು ಪ್ರಾರ್ಥನಾ ಶಾಲೇಯ ಮಕ್ಕಳ ಕಲರವ ಕೇಳಿ. ಮಕ್ಕಳ ಮುಗ್ದ ನಗು ನನಗೆ ತುಂಬಾ ಇಷ್ಟ. ಮಕ್ಕಳೊಡನೆ ಇದ್ದಷ್ಟೂ ಹೊತ್ತು ನಾನು ಅವರಲೊಬ್ಬನಾಗುತ್ತೇನೆ. ಶಾಲೆಯಿಂದ ಹೊರ ಬಂದ ಮಕ್ಕಳು ಸಂಭ್ರಮದಿಂದ ತನ್ನ ತನ್ನ ತಂದೆ/ತಾಯಿಯರ ಬಳಿ ಓಡುತ್ತಿತ್ತು. ಅಂದು ಶಾಲೆಯಲ್ಲಿ ನಡೆದ ಘಟನೆಗಳನ್ನೆಲ್ಲಾ ಒಮ್ಮೆಗೇ ಹೇಳಿ ಬಿಡುವ ಆತುರ, ಆಟವಾಡಲು ಕಾತುರ ಹೀಗೆ ಪುಟಿಯುತ್ತಾ ಸಾಗುತ್ತಿದ್ದವು. ಶಾಲಾ ಬಸ್ಸುಗಳು ಸಹಾ ಸಿದ್ದವಾಗಿದ್ದವು. ಮಕ್ಕಳನ್ನು ಅವರ ನಿತ್ಯ ಸಂಭ್ರಮವನ್ನು ನೋಡುತ್ತಾ ನಿಂತಿದ್ದಷ್ಟು ಕಾಲ ಕಳೆದದ್ದೇ ತಿಳಿಯಲಿಲ್ಲ, ಕೈಗೆ ಕಟ್ಟಿದ್ದ ವಾಚ್ ನೋಡಿದರೆ ಸಮಯ ಆಗಲೇ ೦೪೩೦.

ಅಂದು ಸೋಮವಾರವಾದ ಕಾರಣ ಹಾಯ್ ಬೆಂಗಳೂರ್‍ ಕಛೇರಿಗೆ ರಜೆ ಎಂಬ ವಿಷಯ ನನಗೆ ತಿಳಿದಿತ್ತು. ಕಛೇರಿಯ ಒಂದನೇ ಮಹಡಿ ಹತ್ತಿ ಹೊರಟವನಿಗೆ ಮೊದಲು ಕಾಣಿಸಿದ್ದು ಬಿಳಿ ಬಣ್ಣದ ಅಂಗಿಯ ಮುಗ್ದ ಮುಖಭಾವದ ವ್ಯಕ್ತಿಯೊಬ್ಬರು, ನಾ ಬಂದ ಉದ್ದೇಶವನ್ನು ತಿಳಿಸಿದಾಗ ಆತ ಒಳ ಹೋಗಿ ಒಳಗಿದ್ದ ಹೆಂಗಸೊಬ್ಬರಿಗೆ ವಿಷಯವನ್ನು ತಿಳಿಸಿದರು. ನನ್ನ ಕಣ್ಣುಗಳು ಬೆಳಗೆರೆಯವರಿಗಾಗಿ ಆದಷ್ಟು ಒಳಗೆ ತಡಕಾಡುತ್ತಿದ್ದವು. ಒಳಗಿನಿಂದ ಬಂದ ಹೆಂಗಸಿಗೆ ನನ್ನನ್ನು ನಾನು ಪರಿಚಯಿಸಿಕೊಂಡು ಬಂದಿದ್ದ ವಿಷಯ ತಿಳಿಸಿದೆ. ಆಗಲೇ ಗೊತ್ತಾದದ್ದು ಅವರ ಹೆಸರು ಜಯಂತಿ ಎಂದು. ಭೇಟಿಗಾಗಿ ೦೬೦೦ ಗಂಟೆಗೆ ಬರಬೇಕಾಗಿ ತಿಳಿಸಿದರು. ಅಲ್ಲಿಂದ ಹೊರಬಂದ ನನಗೆ ಕಂಪನಿಗಾಗಿ ಕಾದಿತ್ತು…ನನ್ನ ತುಂತುರು ಮಳೆ…ಅದರೊಡನೆಯೇ ಹಿತವಾದ ನೆನೆಪುಗಳು…

ಆಗ ನಾನು ಸರ್ಕಾರಿ ಕಾಲೇಜಿನ ಕಲಾ ವಿಭಾಗದಲ್ಲಿ ಪಿ.ಯು,ಸಿ ಓದುತ್ತಿದ್ದೆ. ಅವಳೋ.. ಸೈನ್ಸ್, ಅಲ್ಲದೇ ಖಾಸಗಿ ಕಾಲೇಜು. ಇದೂ ಸಹಾ ನನ್ನ ಹಿಂಜರಿಕೆಗೆ ಕಾರಣವಾಗಿತ್ತೇನೋ.. ದಿನವೂ ಅವಳ ಹಿಂದೆ ಹೋಗುತ್ತಿದ್ದ ನನಗೆ ಮಾತನಾಡಿಸುವ ಧೈರ್ಯವಾಗುತ್ತಿರಲಿಲ್ಲ. ಮೊದಲೇ ನಾನು ಕನ್ನಡ ಮೀಡಿಯಂ ಇನ್ನು ಅವಳ ಕಾಲೇಜೋ ಸರ್ವವೂ ಇಂಗ್ಲಿಷ್ ಮಯ. ಅವಳೂ ಸಹಾ ಅವಳ ಸ್ನೇಹಿತೆಯರೊಡನೆ ನಿರಾಳವಾಗಿ ಇಂಗ್ಲಿಷ್ ನಲ್ಲಿ ಮಾತಾಡುವುದನ್ನು ಕೇಳಿದ್ದೆ. ನನ್ನ ಜೊತೆಯಲ್ಲಿದ್ದ ನನ್ನ ಹೀರೋ ಸೈಕಲ್ ನೊಡನೆ ಸದ್ದಿಲ್ಲದೇ ಅವಳ ಹಿಂದೆಯೇ ಹೋಗುತ್ತಿದ್ದೆ. ಅಪ್ಪಿ ತಪ್ಪಿ ಅಕಸ್ಮಾತ್ ಅವಳು ನನ್ನೆಡೆಗೆ ನೋಡಿದರೆಂದಳೇ ಮುಗಿಯಿತು, ಅದಕ್ಕಿಂತ ಹರ್ಷ ನನಗೆ ಮತ್ತೊಂದಿಲ್ಲ, ಆ ದಿನ ರಾತ್ರಿಯಿಡೀ ಬರೀ ಹೊರಳಾಟ. ಹೀಗೆ ಕೆಲ ದಿನ ಕಳೆದ ನನಗೆ ನನ್ನ ಸ್ನೇಹಿತರು ತುಂಬಿದ ಧೈರ್ಯವೋ ಅಥವಾ ಅಂದಿಗೇ ಬೆಳಗೆರೆಯವರ ಬರಹಗಳನ್ನು ಓದುತ್ತಿದ್ದ ನನಗೆ ನನ್ನ ಮೇಲೆ ಬಂದ ನಂಬಿಕೆಯೋ ತಿಳಿಯದು, ಕೊನೆಗೂ ಅವಳನ್ನು ಮಾತನಾಡಿಸುವ ನಿರ್ಧಾರಕ್ಕೆ ಬಂದೆ. ಆಗಲೇ ಉಗಮವಾದ ಪ್ರಶ್ನೆಗಳು ನೂರೆಂಟು  ಏನು ಮಾತಾಡಲಿ? ಎಲ್ಲಿ ಮಾತಾಡಲಿ ? ಹೇಗೆ ಮಾತು ಪ್ರಾರಂಭಿಸಲಿ ಹೀಗೆಯೇ.. ಕಡೆಗೂ ನೋಟ್ಸ್ ಸಿದ್ದವಾಯಿತು. ಮಾತುಗಳನ್ನು ಪೋಣಿಸಿ ಅದಕ್ಕಾಗಿ ಸಿದ್ದಗೊಂಡವನಿಗೆ ಮುಂದಿನ ವಾರವೇ ಇದ್ದ ಅರ್ದವಾರ್ಷಿಕ ಪರೀಕ್ಷೆಯೆಡೆಗೆ ಗಮನವೆಲ್ಲಿಯದೋ ? ಮರುದಿನವೇ ಸಂಜೆ ೦೪೦೦ ಕ್ಕೆ ಆ ಹುಡುಗಿ ಟ್ಯೂಷನ್ ಹೋಗುವ ಸಮಯಕ್ಕೆ ಮುಂಚೆಯೇ ನನ್ನ ಹೀರೋ ಸೈಕಲನ್ನು ಒರೆಸಿಟ್ಟುಕೊಂಡು ಕೆಲ ದಿನಗಳ ಹಿಂದೆಯಷ್ಟೇ ನನ್ನ ತಂದೆ ಕೊಡಿಸಿದ್ದ ಟೀ ಷರ್ಟ್ ಹಾಗೂ ಜೀನ್ಸ್ ಹಾಕಿ ತಯಾರಾದೆ….

ಹೀಗೆ ಎಡ ಬಿಡದೇ ಬರುತ್ತಿದ್ದ ಹಳೇ ನೆನಪುಗಳಿಗೆ ಸ್ವಲ್ಪ ವಿರಾಮ ನೀಡಿ ಕೈಗೆ ಕಟ್ಟಿದ್ದ ವಾಚಿನೆಡೆಗೆ ನೋಡಿದರೆ ಆಗಲೇ ಸಮಯ ೦೬೦೦ ರ ಸಮೀಪಿಸುತ್ತಿತ್ತು. ಮಳೆ ಗುಡ್ ಬೈ ಹೇಳತೊಡಗಿತ್ತು. ಜೇಬಿನಲ್ಲಿದ್ದ ಮೊಬೈಲ್ ತೆಗೆದು ಬೆಳಗೆರೆಯವರಿಗೆ ಫೋನಾಯಿಸಿದೆ. ಬೆಳಗೆರೆಯವರೇ ರಿಸೀವ್ ಮಾಡಿದರು. ಅವರದು ಎಂದಿನಂತೆ ಆತ್ಮೀಯತೆಯ ಮಾತು. ಭಾಸ್ಕರ್‍ ಎಂದೊಡನೆಯೇ ಅವರಿಗೆ ನಾನು ನೆನಪು ಬಂದಿದ್ದು ನನಗೆ ಖುಷಿ ತಂದಿತ್ತು. “ಅಣ್ಣಾ ನಾನು ತಮ್ಮ ಕಛೇರಿಯ ಮುಂದಿದ್ದೇನೆ” ಎಂದು ಹೇಳಿದೆ. ತಕ್ಷಣವೇ ಮೇಲೆ ಬರಲು ಸೂಚಿಸಿದ ಅವರು ತಮ್ಮ ಸಹಾಯಕರಿಗೆ ನನ್ನನ್ನು ಕರೆಯಲು ಹೇಳಿದ್ದು ಫೋನಿನಲ್ಲಿ ಕೇಳಿಸಿಕೊಂಡು ಮೇಲೆ ಹೊರಟೆ.

ಕಛೇರಿಯಲ್ಲಿದ್ದವರು ಕೆಲವರೇ ಆದರೂ ಪ್ರತಿಯೊಬ್ಬರಲ್ಲೂ ಒಂದು ಶಿಸ್ತಿನ ಮೌನ. ಒಳಗಿನಿಂದ ಬೆಳಗೆರೆಯವರ ದ್ವನಿ ಕಂಡು ಕುಳಿತಲ್ಲೇ ಉಲ್ಲಸಿತನಾಗುತ್ತಿದ್ದೆ. ಕೆಲ ನಿಮಿಷ ಕಾದ ಬಳಿಕ ಅಂತೂ ಆ ಗಳಿಗೆ ಸಮೀಪಿಸಿತು. ಒಳಗಿನಿಂದ ಬಂದ ಜಯಂತಿ ರವರು ಬಾಸ್ ಕರೆಯುತ್ತಿದ್ದಾರೆ ಎಂದೊಡನೇ ಒಳ ಹೋದೆ. ತಮ್ಮ ಕಛೇರಿಯ ಮಧ್ಯದಲ್ಲೇ ಶಾಂತವಾಗಿ ಏನನ್ನೋ ಬರೆಯುತ್ತಿದ್ದ ಬೆಳಗೆರೆಯವರನ್ನು ಕಂಡು ನಿಂತಲ್ಲೇ ನಿಂತೆ, ಹಾಗೆಯೇ ಅಲ್ಲಿಯೇ ನಿಂತು ನೋಡುತ್ತಿದ್ದವನೆಡೆಗೆ ಬೆಳಗೆರೆಯವರು ನೋಡಿ ಆತ್ಮೀಯ ಮುಗುಳ್ನಗೆಯೊಂದಿಗೆ ಬರಮಾಡಿಕೊಂಡರು. ನನ್ನ ಮೈಯಲ್ಲೆಲ್ಲಾ ಮಿಂಚಿನ ಸಂಚಾರ. ಅವರ ಸರಳತೆ ನನ್ನನ್ನು ಮೂಕನನ್ನಾಗಿಸಿತ್ತು. ಅವರೊಡನೆ ಕಳೆದ ಈ ೧೫ ನಿಮಿಷಗಳು ನಾನು ಎಂದಿಗೂ ಮರೆಯಲಾಗದ ಕ್ಷಣಗಳು. ಹಾಯ್ ಬೆಂಗಳೂರ್‍, ಓ ಮನಸೇ, ಇಂಟರ್‍ ನೆಟ್, ಬ್ಲಾಗ್, ಹೀಗೆಯೇ ಕೆಲವಾರು ವಿಷಯ ಬಗ್ಗೆ ಮಾತನಾಡಿ ಅವರೊಡನೆ ಒಂದು ಫೊಟೋ ತೆಗೆಸಿಕೊಂಡು, ಅವರು ಉಡುಗೊರೆಯಾಗಿ ನೀಡಿದ ಪುಸ್ತಕವನ್ನು ಪಡೆದುಕೊಂಡು ವಿಧಾಯ ಹೇಳಿ ಕಛೇರಿಯ ಮೆಟ್ಟಿಲಿಳಿಯುತ್ತಿದ್ದಂತೇ ಕಣ್ತುಂಬಿ ಬಂದಿತ್ತು. ಮನಸ್ಸು ಅವರ ಸರಳ ವ್ಯಕ್ತಿತ್ವಕ್ಕೆ ಒಳಗೊಳಗೇ ಪ್ರಣಾಮಗಳನ್ನು ಸಲ್ಲಿಸುತ್ತಿತ್ತು.

ಕಛೇರಿಯಿಂದ ಹೊರ ಬಂದು ಮೆಜೆಸ್ಟಿಕ್ ಗೆ ಹೋಗುವ ಬಿ.ಟಿ.ಎಸ್ ಬಸ್ಸೇರಿ ಕುಳೀತಿದ್ದವನ ಕೈಯಲ್ಲಿ ಬೆಳಗೆರೆಯವರು ಉಡುಗೆರೆಯಾಗಿ ನೀಡಿದ ಪುಸ್ತಕ ಭದ್ರವಾಗಿ ಕುಳಿತಿತ್ತು. ತೆರೆದು ನೋಡಿದ ಕೂಡಲೇ ಕಣ್ಣಿಂದ ಜಾರಿ ಬಿದ್ದ ಹನಿಯೊಂದು ಅಲ್ಲೇ ಬಿದ್ದು ಮಾಯವಾಗಿತ್ತು. ಪುಸ್ತಕದ ಮೊದಲ ಪುಟದಲ್ಲಿ ಬೆಳಗೆರೆಯವರೇ ಸ್ವತಃ ಬರೆದ ಅಕ್ಷರಗಳು ನನ್ನನ್ನು ಸಂಪೂರ್ಣವಾಗಿ ಆವರಿಸಿದ್ದವು.

ಬೆಳಗೆರೆಯವರ ಕೈ ಬರಹ

ಬೆಳಗೆರೆಯವರ ಕೈ ಬರಹ

“ಒಲವಿನ ತಮ್ಮ ಭಾಸ್ಕರ್‍ಗೆ, ಅಕ್ಕರೆಯಿಂದ”-ಸಹಿ, ರವಿ ಬೆಳಗೆರೆ.

-ಭಾಸ್ಕರ್‍.

4 Responses to ಈ ನೆನಪು ಇನ್ನು ಶಾಶ್ವತ

  1. dayanand ಹೇಳುತ್ತಾರೆ:

    Dear Ravi Sir,
    I,ve been a great fan of urs…i recently read HELI HOGU KAARANA…my brother had insisted me to read it a year back but i read it now..it was like a journey..it is really anepic sir…HATS OFF…SIR i have been searching for ur email id…plz make it available to fans SIR..its a great way to stay in touch with them..i sincerely hope to meet you personally sir…plase give me a chance to meet you..atleast for a few moments…please sir

  2. vinaya ಹೇಳುತ್ತಾರೆ:

    dear ravi belegere,
    elli namma o manase book mooru tingalinda bandilla?

  3. vinay ಹೇಳುತ್ತಾರೆ:

    hey bhasker ur lucky yaar…..nivu anta adbuta vyakti na meet madidira matadidira avar jote ur lucky..

ನಿಮ್ಮ ಟಿಪ್ಪಣಿ ಬರೆಯಿರಿ