ಫಸ್ಟ್ ಹಾಫ್:ಐವತ್ತರ ಬೆಳಗೆರೆಗೆ ಅಕ್ಕರೆ ಕೊಡುಗೆ

October 8, 2009

ಫಸ್ಟ್ ಹಾಫ್

ಫಸ್ಟ್ ಹಾಫ್

ಪತ್ರಿಕೆ-ಸಾಹಿತ್ಯ ಕೃತಿಗಳ ಮೂಲಕ, ಟಿ.ವಿ-ಸಿನೆಮಾ ಮಾಧ್ಯಮಗಳ ಮೂಲಕ ಓದುಗರ-ವೀಕ್ಷಕರ ಪಾಲಿಗೆ ಸದಾ ಅಚ್ಚರಿ-ಹೊಸ ಅನುಭವಗಳನ್ನು ಸೃಷ್ಟಿಸುವ ವಿಸ್ಮಯಗಳ ಸರದಾರ ರವಿ ಬೆಳಗೆರೆ ಅವರಿಗೆ ಐವತ್ತೆರಡರ ಹರೆಯ!

“ಫಸ್ಟ್ ಹಾಫ್…” ಇದು ಬೆಳಗೆರೆಯವರ ಐವತ್ತನೇ ವರ್ಷದ ಸಂಭಾವನಾ ಗ್ರಂಥ. ಬೆಳಗೆರೆ ಅವರ ಸಾಧನೆ-ಸಿದ್ದಿಗಳ ಕುರಿತು ಹೊಗಳುವವರಿಗಿಂತ, ತೆಗಳುವವರಿಗಿಂತ ಸಂಪೂರ್ಣ ಬಿನ್ನವಾಗಿ ಕಂಡವರೆಂದರೆ ಅವರ ಸಹೋದ್ಯೋಗಿಗಳು. ಇವರೆಲ್ಲರ ಅಕ್ಕರೆಯ ಕೊಡುಗೆಯೇ “ಫಸ್ಟ್ ಹಾಫ್”.

“ಫಸ್ಟ್ ಹಾಫ್…” ಹೆಸರನ್ನು ಬದುಕಿನ ಮೊದಲ ಐವತ್ತು ವರ್ಷಗಳಿಂದ ಎಂಬ ಅನ್ನುವ ಅರ್ಥದಲ್ಲಿ ಆಯ್ಕೆ ಮಾಡಿಕೊಳ್ಳಲಾಗಿದೆ. ರವಿ ಬೆಳಗೆರೆ ಅವರ ಹುಟ್ಟಿನಿಂದ ಈ ಐವತ್ತು ವರ್ಷಗಳ ಅವಧಿಯ ಸಾಧನೆ ಸಿದ್ದಿಗಳನ್ನು, ಏಳು-ಬೀಳುಗಳ ಚಿತ್ರಣವನ್ನು ಸೆರೆಹಿಡಿಯಲು ಈ ಕೃತಿಯಲ್ಲಿ ಪ್ರಯತ್ನಿಸಿಲಾಗಿದೆ.

ಕೃತಿಯ ವಿವರ:

ಸಂಪಾದಕರು: ಶರತ್ ಕಲ್ಕೋಡ್

ಪರಿಕಲ್ಪನೆ ಮತ್ತು ವಿನ್ಯಾಸ: ರವಿ ಅಜ್ಜೀಪುರ, ವಿಜಯಕುಮಾರ್‍ ಅಮೀನಗಡ

ಮುಖಪುಟ ಚಿತ್ರ: ಎಸ್.ಜಿ.ನಿವೇದಿತಾ.

ಇಂತಿಪ್ಪ “ಫಸ್ಟ್ ಹಾಫ್…” ಕೃತಿಯ ಕೆಲಪುಟಗಳನ್ನು ಆ ಮೂಲಕ ಬೆಳಗೆರೆಯವರ ಅನುಭವದ ನುಡಿಗಳನ್ನು ಜೊತೆ ಜೊತೆಗೇ ಹಲವು ಅಮೂಲ್ಯ ಭಾವಚಿತ್ರಗಳನ್ನೂ ಸಹಾ ಈ ಬ್ಲಾಗಿನಲ್ಲಿ ಪ್ರಕಟಿಸಲಾಗುತ್ತಿದೆ. ಬ್ಲಾಗಿನ ಸೈಡ್ ಬಾರಿನಲ್ಲಿರುವ ಫಸ್ಟ್ ಹಾಫ್ ಲಿಂಕನ್ನು ಕ್ಲಿಕ್ ಮಾಡುವುದರ ಮೂಲಕ ಪಸ್ಟ್ ಹಾಫ್ ನ ಪರಿಚಯವನ್ನು ನೀವು ಮಾಡಿಕೊಳ್ಳಬಹುದು. ಒಮ್ಮೆ ಭೇಟಿ ಮಾಡಿ ತಮ್ಮ ಅನಿಸಿಕೆ, ಸಲಹೆ ಹಾಗೂ ಅಭಿಪ್ರಾಯಗಳನ್ನು ತಿಳಿಸಿದರೆ ನಾನು ಧನ್ಯ ಹಾಗೂ  ನನ್ನ ಪ್ರಯತ್ನ ಸಾರ್ಥಕ.

ಈ ಬ್ಲಾಗಿನ ಸೈಡ್ ಬಾರಿನಲ್ಲಿರುವ ಮೊದಲ ಲಿಂಕನ್ನು ಕ್ಲಿಕ್ ಮಾಡಿ.

-ಭಾಸ್ಕರ್‍


ದೊಡ್ಡ ತಪ್ಪು ತಿದ್ದಿಕೊಳ್ಳುತ್ತೇವೆಂದು ಹೊರಡುವ ಭರದಲ್ಲಿ…

October 4, 2009

smoking

“ಅದೊಂದು ಇಲ್ದೆ ಹೋದ್ರೆ ಅವನು ದೇವರಂಥ ಮನುಷ್ಯ. ಏನು ಮಾಡೋದು ಹೇಳಿ? ವಿಪರೀತ ಕುಡೀತಾನೆ…” ಎಂಬ ಧಾಟಿಯ ಮಾತು ಸಾಕಷ್ಟು ಕೇಳಿರುತ್ತೀರಿ. “ಅದೊಂದು ಇಲ್ಲದೆ ಹೋದರೆ” ಎಂಬುದಕ್ಕೆ ಹೆಚ್ಚಿನ ಮಹತ್ವವಿರುತ್ತದೆ ಮಾತುಗಳಲ್ಲಿ. ಅವನು ಕುಡುಕ, ಕೃಪಣ, ಕೋಪಿಷ್ಟ, ಲಂಪಟ, ಜುಗಾರಿ ಇತ್ಯಾದಿ ಇತ್ಯಾದಿ. ಈ ಪೈಕಿ ಯಾವುದಿರುತ್ತದೋ ಅದನ್ನು ಹೆಸರಿಸಿ, “ಅದೊಂದು” ಇಲ್ದೆ ಹೋಗಿದ್ರೆ ದೇವರಂಥ ಮನುಷ್ಯ ಅನ್ನುವುದು ಲೋಕಾರೂಢಿ. ಇದು ಪರಂಪರಾಗತವಾಗಿ ಬಂದ ಮೂರ್ಖತನವೂ ಹೌದು.

ದುಶ್ಚಟಗಳನ್ನು ನಾನು ಬೆಂಬಲಿಸುತ್ತೇನೆ ಅಂದುಕೊಳ್ಳಬೇಡಿ. ಆದರೆ ನಿಜಕ್ಕೂ ದುಶ್ಚಟಗಳು ನಮಗೆ ಮಾಡಬಹುದಾದ ಹಾನಿಗಳೇನು ಅನ್ನೋದನ್ನು ನೋಡೋಣ ಬನ್ನಿ. ಮೊದಲನೆಯದಾಗಿ ಕುಡಿತವನ್ನೇ ತೆಗೆದುಕೊಳ್ಳಿ. ಕುಡಿತ ಆರೋಗ್ಯ ಕೆಡಿಸುತ್ತದೆ, ಮರ್ಯಾದೆ ಕಳೆಯುತ್ತದೆ, ಸ್ಥಿಮಿತ ಹಾಳು ಮಾಡುತ್ತದೆ ಅಂತೆಲ್ಲಾ ಅಂತಾರೆ. ಇವೆಲ್ಲಕ್ಕಿಂತ ಹೆಚ್ಚಿನ ಅಪಾಯವನ್ನು ಜನ ಗಮನಿಸಿರುವುದಿಲ್ಲ. “ಕುಡಿತ ಮನುಷ್ಯನನ್ನು ಸೋಮಾರಿಯನ್ನಾಗಿ ಮಾಡುತ್ತದೆ” ಎಂಬುದು ಹೆಚ್ಚು ನಿಜ. ವಿಪರೀತ ಕುಡಿರುವವರು ಕೆಲಸಗಳನ್ನು ಮುಂದೂಡುತ್ತಾ ಹೋಗುತ್ತಾರೆ. ಆರರಿಂದ ಹನ್ನೆರಡು ತಾಸು ಕುಡಿತಕ್ಕೆ ಖರ್ಚಾಗಿ ಹೋಗುತ್ತದೆ. ಕುಡಿದಾಗ ಸೊಗಸಾದ ಐಡಿಯಾಗಳು ಬರುತ್ತವಾದರೂ, ಅವುಗಳನ್ನು ಕಾರ್ಯರೂಪಕ್ಕೆ ತುವಷ್ಟರಲ್ಲಿ ಮನುಷ್ಯ ಮತ್ತೆ ಕುಡಿದಿರುತ್ತಾನೆ ಅಥವಾ ಕಾರ್ಯರೂಪಕ್ಕೆ ತರುವಷ್ಟು ಸಹನೆ ಮತ್ತು ಎನರ್ಜಿ ಉಳಿದಿರುವುದಿಲ್ಲ. ವಿಪರೀತ ಧಾರಾಳಿಯಾಗುತ್ತಾನೆ. ಗಿಲ್ಟ್ ಮುಚ್ಚಿಡುವುದಕ್ಕಾಗಿ ಅವಮಾನಿತನಾಗುತ್ತಾನೆ. ಸಾಲಗಾರನಾಗುತ್ತಾನೆ.  ಕೊನೆಯಲ್ಲಿ ಕೂತು ಲೆಕ್ಕ ಹಾಕಿದರೆ ಒಬ್ಬ ಕುಡುಕ ವಿಫಲಜೀವಿಯಾಗಿರುತ್ತಾನೆ. ಇವೆಲ್ಲವೂ ಆತ ತನಗೆ ತಾನು ಮಾಡಿಕೊಳ್ಳುವ ಅಪಚಾರಗಳು. ಇದರಿಂದ ಆತನ ಮನೆ ಮಂದಿಗೆ ಸಮಸ್ಯೆಯಾಗಬಹುದೇ ಹೊರತು, ಬೇರೆ ತರಹದ ನಷ್ಟಗಳಿರುವುದಿಲ್ಲ. “ಕುಡಿದು ಅತ್ಯಾಚಾರ ಮಾಡಿದ, ಕೊಲೆ ಮಾಡಿದ” ಅಂದರೆ ನಾನು ಒಪ್ಪುವುದಿಲ್ಲ. ಅಲ್ಲಿ ಅವನಲ್ಲಿನ Instinct ಗಳು. “ಅತ್ಯಾಚಾರ ಮಾಡುವಾಗ ಆತ ಕುಡಿದಿದ್ದ ಅಥವಾ ಕೊಲೆ ಮಾಡುವಾಗ ಆತ ಕುಡಿದಿದ್ದ” ಎಂಬುದು ಹೆಚ್ಚುವರಿ. ಅಲ್ಲಿ ದೋಷ ಕುಡಿತದ್ದಲ್ಲ.

ಹಾಗೇನೇ ಇಸ್ಪೀಟು ಅದೂ ಕೂಡ ತನಗೆ ತಾನೇ ಮಾಡಿಕೊಳ್ಳುವ ಅಪಚಾರ. ದುರಾಸೆಗೆ ಬಿದ್ದ ಮನುಷ್ಯ ಇಸ್ಪೀಟಿನ ಚಟಕ್ಕೆ ಬಳಿತ್ತಾನೆ. ದುಡ್ಡಿಗಿಂತ ಹೆಚ್ಚಾಗಿ ಬದುಕಿನ ಅಮೂಲ್ಯ ಗಂಟೆಗಳನ್ನು, ದಿನಗಳನ್ನು ಚಕ್ಕಂಬಟ್ಲೆ ಹಾಕಿಕೊಂಡು ಕೂತು ಪೋಲು ಮಾಡಿ ಬಿಡುತ್ತಾನೆ. “ಸ್ಕರ್ಟ್ ಚೇಸಿಂಗ್” ಅಂತ ಇಂಗ್ಲಿಷಿನಲ್ಲಿ ಅನ್ನೋದು: ಹೆಂಗಸರ (ಮತ್ತು ಗಂಡಸರ) ಬಲಹೀನತೆಗೆ ಸಂಬಂಧಿಸಿದ ಹಾಗೆ. ಈ ಚಟವಿರುವವರು ವಿಪರೀತ ಸುಳ್ಳು ಹೇಳುತ್ತಾರೆ ಮೋಸ ಮಾಡುತ್ತಾರೆ ಎಂಬುದು ಬಿಟ್ಟರೆ ಈ ಚಟವೂ ಕೂಡ ತನಗೆ ತಾನು ಮಾಡಿಕೊಳ್ಳುವ ಅಪಚಾರವೇ. ಲೋಲುಪತೆಯ ಗುಂಗಿಗೆ ಬಿದ್ದು ರಾಜ್ಯಗಳನ್ನೇ ಕಳೆದುಕೊಂಡವರನ್ನು ನೋಡಿದ್ದೇನೆ. ಹೆಂಗಡ ಖಯಾಲಿಗೆ ಬಿದ್ದು ಹಣ, ಗೌರವ, ನೆಮ್ಮದಿ ಕಳೆದುಕೊಂಡವರಿದ್ದಾರೆ. ಆರೋಗ್ಯವನ್ನು ರಿಸ್ಕಿಗೆ ತಳ್ಳಿದವರೂ ಕಡಿಮೆಯಿಲ್ಲ. ಆದರೆ ಎಲ್ಲಕ್ಕಿಂತ ಹೆಚ್ಚಾಗಿ ಈ ಚಟವೂ ಮನುಷ್ಯನ ಸಮಯವನ್ನು ಹಾಳು ಮಾಡುತ್ತದೆ. ಅತಿ ದೊಡ್ಡ ರಿಸ್ಕೆಂದರೆ ಅದೇ.

ಬಿಡಿ, ತಪ್ಪುಗಳ ಪಟ್ಟಿ ಮಾಡುತ್ತಾ ಹೋದರೆ ಬೆಳೆಯುತ್ತಲೇ ಹೋದೀತು. ಆದರೆ ಇವೆಲ್ಲವೂ ಮೇಜರ್‍ ಮಿಸ್ಟೇಕ್‌ಗಳು. ಕೆಲವೊಮ್ಮೆ ಅಕ್ಷಮ್ಯ ಅಂತ ಪರಿಗಣಿಸಲ್ಪಡುವಂತಹವು. ಇವು ಕೊಡುವ ಆನಂದ ಎಂಥದ್ದೇ ಆಗಿರಲೀ ಕಟ್ಟಿಸಿಕೊಳ್ಳುವ ಕಂದಾಯ ಮಾತ್ರ ಬಹಳ ದೊಡ್ಡದಾಗಿರುತ್ತದೆ. ನನ್ನ ಮಟ್ಟಿಗೆ ಒಬ್ಬ ಮನುಷ್ಯ ತನ್ನ ಚಟಗಳಿಗಾಗಿ ಕಟ್ಟುವ ಅತೀ ದೊಡ್ಡ ಕಂದಾಯವೇನೆಂದರೆ-ಸಮಯ. ನಿಜಕ್ಕೂ ಅಕ್ಷಮ್ಯವಾದುದು ಅದೇ: ಚಟವಲ್ಲ. ಒಂದು ಪೆಗ್ ವಿಸ್ಕಿ, ಒಂದು ಸುತ್ತು ಇಸ್ಪೀಟು, ಚಿಕ್ಕದೊಂದು ಸರಸ ಯಾರನ್ನೂ ಈತನಕ ಕೊಂದಿಲ್ಲ.

ಆದರೆ ತಪ್ಪುಗಳು ಕೊಲ್ಲಲೇ ಬೇಕು ಎಂದಿಲ್ಲವಲ್ಲ? ಲೆಕ್ಕ ಹಾಕಿದರೆ, ನಾವು ಯಾವ್ಯಾವುದನ್ನು ತಪ್ಪು-ಅಪರಾಧ ಅಥವಾ ದುಷ್ಚಟ ಅನ್ನುತ್ತೇವೆಯೋ, ಅವುಗಳಿಗಿಂತ ಹೆಚ್ಚು ತಪ್ಪುಗಳನ್ನು ದಿನವಿಡೀ ಮಾಡುತ್ತಿರುತ್ತೇವೆ. ಆದರೆ ದೊಡ್ಡ ತಪ್ಪಿನ ಅಥವಾ ದುಷ್ಚಟದ Glare ನಲ್ಲಿ ಅದರ ಝಳದಲ್ಲಿ ಚಿಕ್ಕ ತಪ್ಪುಗಳೂ ಮರೆಯಾಗಿ ಬಿಡುತ್ತವೆ. ವಿಪರೀತ ಕುಡಿಯುವ ಗಂಡ “ ಅದನ್ನೊಂದು ಬಿಟ್ರೆ ಸಾಕು, ನನ್ನ ಗಂಡ ದೇವರಂಥವನು” ಅಂತ ಅವನ ಹೆಂಡತಿ ಅಂದು ಕೊಳ್ಳುತ್ತಿರುತ್ತಾಳೆ. ಅವನು ಮಾಡುವ ಪ್ರತಿಯೊಂದು ಕೂಡಾ “ಕುಡಿದದ್ದರಿಂದಲೇ ಮಾಡುತ್ತಾನೆ” ಅಂತ ತಪ್ಪು ತಿಳಿದಿರುತ್ತಾಳೆ. ಆದರೆ ಅವನ ಶ್ವಪಚತನ, ಮುಂಗೋಪ, ಅಸಹನೆ, ಪೆಡಸು ಮಾತು, ಸೋಮಾರಿತನ, ಸಾಲಕೋರತನ, ಲಂಚಕೋರತನ, ಲಂಪಟತೆ ಮುಂತಾದವು ಕುಡಿತಕ್ಕೆ ರಿಲೇಟ್ ಆಗದೆಯೂ ಅವನಲ್ಲಿ ಮನೆ ಮಾಡಿಕೊಂಡಿರಬಹುದು ಅಂತ ಆಕೆಗೆ ಅನ್ನಿಸಿರುವುದಿಲ್ಲ. ಕುಡಿಯೋದೊಂದು ಬಿಟ್ಟು ಬಿಟ್ಟರೆ ನನ್ನ ಗಂಡನಿಗಿಂತ ದೇವರಿಲ್ಲ ಅಂದುಕೊಂಡಿರುತ್ತಾಳೆ. ದೇವರ ಪಾತ್ರದಾರಿಯಾದ ಗಂಡನೂ ಹಾಗಂತಲೇ ಅಂದುಕೊಂಡಿರುತ್ತಾನೆ. ಸುತ್ತಲಿನವರೂ ಕೂಡ “ಅದೊಂದು” ತಿದ್ದಿ ಸರಿಪಡಿಸಿ ಬಿಟ್ಟರೆ ಸಾಕು ಅಂದುಕೊಂಡಿರುತ್ತಾರೆ.

ಎಲ್ಲರೂ ಮಾಡುವ ತಪ್ಪೇ ಅದು. ಮನುಷ್ಯನ ಅತಿ ದೋಡ್ಡ ತಪ್ಪನ್ನು ತಿದ್ದಲು ಹೋಗುತ್ತಾರೆ. ಅಥವಾ ತಮ್ಮ ಮೇಜರ್‍ ಬಲಹೀನತೆಯನ್ನು ಸರಿಪಡಿಸಿಕೊಳ್ಳಲು ಹೆಣಗುತ್ತಾರೆ. ಕುಡಿತ ಬಿಡಲು ಆಸ್ಪತ್ರೆ ಸೇರಿಕೊಳ್ಳುವುದರಿಂದ ಹಿಡಿದು ಹೆಂಗಸರ ಖಯಾಲಿ ಬಿಡಲು ಅಯ್ಯಪ್ಪ ಸ್ವಾಮಿಯ ಮಾಲೆ ಹಾಕುವ ತನಕ ಸರದಿ.

ಆದರೆ ಫ್ರೆಂಡ್ಸ್, ಓದು ಸಲ ಈ ಮೇಜರ್‍ ತಪ್ಪುಗಳನ್ನು ಪಕ್ಕಕ್ಕಿಟ್ಟು ಯೋಚಿಸಿ. ನಮ್ಮಲ್ಲಿ ಎಷ್ಟೊಂದು ಚಿಕ್ಕ ಚಿಕ್ಕ ತಪ್ಪು, ಬಲಹೀನತೆ, ಅಪಸವ್ಯಗಳಿವೆಯಲ್ಲವೇ? ನನಗಂತೂ ನಾನೊಂದು ಬೃಹತ್ ತಪ್ಪುಗಳ ಮೂಟೆ ಅನ್ನಿಸಿಬಿಡುತ್ತದೆ. Actually ಇವು ಸುಲಭಕ್ಕೆ ಸರಿಪಡಿಸಬಹುದಾದ, ತಿದ್ದುಕೊಳ್ಳಬಹುದಾದ ಚಿಕ್ಕ ಚಿಕ್ಕ ತಪ್ಪುಗಳೇ. ಆದರೆ, ಮೊದಲು ದೊಡ್ಡ ತಪ್ಪು ಸರಿಪಡಿಸಿಕೊಳ್ಳೋಣ. ಆಮೇಲೆ ಉಳಿದವು ತಂತಾನೆ ಸರಿಹೋಗುತ್ತದೆ ಎಂಬ ಮೂರ್ಖ ತೀರ್ಮಾನಕ್ಕೆ ಬರುತ್ತೇವೆ. ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆಯಬೇಕಾದ ಹುಡುಗ ನಾನು ಐ.ಎ.ಎಸ್ ಮಾಡುವುದರ ಮೇಲೆ ಗಮನವಿಟ್ಟಿದ್ದೇನೆ ಅಂದುಕೊಳ್ಳುವ ಹಾಗೆ.

ಉಹೂಂ, ಬದುಕು ಹಾಗೆಲ್ಲ ಒಂದು ದೊಡ್ಡ ತಪ್ಪು ಸರಿಪಡಿಸಿದ ಮಾತ್ರಕ್ಕೇ ತಂತಾನೇ ಚಿಕ್ಕಪುಟ್ಟ ತಪ್ಪುಗಳನ್ನು ಸರಿಗೊಳಿಸುವುದಿಲ್ಲ. ಪ್ರತೀ ತಪ್ಪನ್ನೂ ನಾವು ಪ್ರಯತ್ನಪೂರ್ವಕವಾಗಿ ತಿದ್ದಿಕೊಳ್ಳಬೇಕಾಗುತ್ತದೆ. ಯಾವತ್ತೋ ಒಂದು ದಿನ ಕುಡಿತ ಬಿಟ್ಟ ಮೇಲೆ ಅದು ಕಂಟ್ರೋಲಿಗೆ ಬಂದ ಮೇಲೆ ಸಿಗರೇಟು ಬಿಟ್ಟರಾಯಿತು ಅಂತ ಹೊಸ ಸಿಗರೇಟಿಗೆ ಕಡ್ಡಿ ಗೀರುವುದಿದೆಯಲ್ಲ ಮೂರ್ಖತನವೆಂದರೆ ಅದೇ.

-ರವಿ


ಕಳೆದ ತಿಂಗಳು ನೀರು ತಪ್ಪಿ ಹೋಗಿ ಕಿಬ್ಬೊಟ್ಟೆಯಾಳದಲ್ಲೆಲ್ಲೋ ಹೊರಳು!

October 2, 2009

lovers

ಮೆಲ್ಲನೆ ನೀ ಬಂದು ಕೈ ಮುಟ್ಟಿದೇ

ನಲ್ಲೆಯ ಈ ದೇಹ ಝಲ್ಲೆನ್ನದೇ…

ಬೆಳಗ್ಗೆ ಹಿತ್ತಿಲಲ್ಲಿ ನಿನ್ನ ಕೆಂಪು ಚೆಕ್ಸ್ ಅಂಗಿ ಒಗೆದು ಹಾಕುತ್ತಿದ್ದಾಗ ಪಕ್ಕದ ಮನೆಯ ರೇಡಿಯೋದಲ್ಲಿ ಕೇಳಿಸಿದ ಹಾಡು. ಮನಸ್ಸಿಗೆ ನೂರು ನೆನಪು. ಒಂದೊಂದ್ಸಲ ನನ್ನ ಮೇಲೆ ನಂಗೇ ಸಿಟ್ಟು ಬರುತ್ತೆ. ಯಾಕೆ ಹೀಗೆ ಜಗತ್ತಿನಲ್ಲಿರುವ ಮತ್ತೆಲ್ಲವನ್ನೂ ಮರೆತು ಬೆಳಗ್ಗೆ ಎದ್ದವಳೇ ನಿನ್ನಲ್ಲಿಗೆ ಓಡಿ ಬರಬೇಕು ನಾನು? ಎಚ್ಚರವಾಗಿ ಕಣ್ಣು ಬಿಟ್ಟ ತಕ್ಷಣ ಅಮ್ಮನ ಫೋಟೋ ನೋಡುತ್ತೇನೆ. ಅವಳ ಶುಭ್ರ ಮಂದಹಾಸದಲ್ಲಿ ನೀನೇ ಕಂಡಂತಾಗುತ್ತದೆ. ಇದ್ದಿದ್ದರೆ ನಿನ್ನನ್ನು ನೋಡಿ ಅದೆಷ್ಟು ಸಂತೋಷ ಪಡುತ್ತಿದ್ದಳೋ ಅಂತ ಅಂದುಕೊಳ್ಳುತ್ತಳೇ ಸ್ನಾನ. ಇವತ್ತ್ಯಾಕೋ ಹಾಕಿಕೊಳ್ಳುವಾಗ ಬಟ್ಟೆ ಕೊಂಚ ಬಿಗಿಯೆನ್ನಿಸಿದವು. ನೀನು ಮೊದಲೇ ಡುಮ್ಮೀ ಅಂತ ರೇಗಿಸ್ತಿರ್‍ತೀಯ. ಸೀರೆಯುಟ್ಟುಕೊಳ್ಳುವಾಗ ಹೊಟ್ಟೆಯ ಪುಟ್ಟ ಮಡತೆಯ ಮೇಲಿನ ಹುಟ್ಟು ಮಚ್ಚೆ ಕಾಣಿಸಿತು. ನಿನಗೆ ಅದನ್ನು ಕಂಡರೆ ಎಂಥ ಹುಚ್ಚು ಪ್ರೀತಿಯೋ, ಕೆನ್ನೆಗೆ ಕೊಟ್ಟದ್ದಕ್ಕಿಂತ ಹೆಚ್ಚಿನ ಮುತ್ತು ನನ್ನ ಹೊಟ್ಟೆಯ ಮೇಲಿನ ಮಚ್ಚೆಯೇ ನುಂಗಿತು. ಸರಸರನೆ ಅಡುಗೆಗಿಟ್ಟು ಅಪ್ಪನಿಗೆ ತಿಂಡಿ ಮಾಡಿಕೊಟ್ಟೆ. ಜಗತ್ತಿಗೇ ರಜೆಯಿದೆಯೇನೋ ಎಂಬಂತೆ ಮಲಗಿದ್ದ ತಮ್ಮನನ್ನು ಎಬ್ಬಿಸುವ ಹೊತ್ತಿಗಾಗಲೇ ಮನೆಯ ಅಂಗಳದಲ್ಲಿ ಘಳ ಘಳ ಸೂರ್ಯ. ಮಾಡಿಟ್ಟದ್ದನ್ನೇ ಡಬ್ಬಿಗೆ ಹಾಕಿಕೊಂಡು ಇನ್ನಿಲ್ಲದ ಸಡಗರದೊಂದಿಗೆ ನಿನ್ನಲ್ಲಿಗೆ ಹೊರಡುತ್ತೇನೆ. ದಾರಿಯುದ್ದಕ್ಕೂ ಯಾವುದೋ ಹಾಡಿನ ಗುನುಗು. ಮೂರು ಹಾಡು ಮುಗಿಯುವಷ್ಟರಲ್ಲಿ ನಿನ್ನ ಮನೆ.

ಪೂಜಿಸಲೆಂದೇ ಹೂಗಳ ತಂದೆ

ದರುಶನ ಕೋರಿ ನಾನಿಂದೇ

ತೆರೆಯೋ ಬಾಗಿಲನೂ..

ಚಿರಂತ್, ಬೆಳಗ್ಗೆ ನಿನ್ನನ್ನ ಎಬ್ಬಿಸುವುದರಲ್ಲೇ ಒಂದು ಮಜವಿದೆ ನೋಡು. ನನ್ನ ಹತ್ತಿರ ತಲಬಾಗಿಲಿನದೊಂದು ಕೀ ಇರದೇ ಹೋಗಿದ್ದಿದ್ದರೆ, ಪುಣ್ಯಾತ್ಮ! ಮದ್ಯಾಹ್ನದ ತನಕ  ಬಾಗಿಲಲ್ಲೇ ನಿಂತಿರಬೇಕಾಗುತ್ತಿತ್ತೇನೋ.ಇಂನ್‌ಸ್ಟಾಲ್‌ಮೆಂಟಿನಲ್ಲಿ ಏಳೋ ಮಹಾಶಯ ನೀನು. ಆದರೂ ನಿದ್ದೆಯಲ್ಲಿ ನಿನ್ನನ್ನು ನೋಡುವುದೇ ಒಂದು ಚೆಂದ.  ತುಂಬ ನೀಟಾಗಿ ಬಟ್ಟೆ ಹಾಕಿಕೊಂಡು, ತಲೆ ಬಾಚಿಕೊಂಡು ಊಹುಂ, ನಿನ್ನ ಕೆದರಿದ ಕ್ರಾಪೇ ಚಂದ. ನುಣ್ಣಗೆ ಷೇವ್ ಮಾಡಿಕೊಂಡಿರುತ್ತೀಯಲ್ಲ? ಅದಕ್ಕಿಂತ ಚೂರು ಚೂರು ಗಡ್ಡ ಬೆಳೆದಿದ್ದರೇನೇ ಸರಿ. ಇನ್ನೊಂದೇ ಒಂದು ಸಲ ಮೀಸೆ ತೆಗೆದರೆ ನೋಡು, ಕೆರೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡು ಬಿಡುತ್ತೇನೆ. ಬರೀ ಒಂದು ಟ್ರಾಕ್ ಪ್ಯಾಂಟ್ ಹಾಕಿಕೊಂಡು ಮಲಗಿದವನ ಎದೆ ಮೇಲಿನ ಪೊದೆಗೂದಲು ನೇವರಿಸಿ ನನ್ನ ಪುಸ್ತಕಗಳನ್ನು ಒಂದು ಕಡೆ ಎತ್ತಿಟ್ಟು ನಿನಗೋಸ್ಕರ ಕಾಫಿ ಮಾಡಲು ನಿಲ್ಲುತ್ತೇನೆ. ನಂಗೊತ್ತು, ನಿನಗೆ ರಾತ್ರಿ ಹಾಕಿಟ್ಟ ಡಿಕಾಕ್ಷನ್ನಿನ ಕಾಫಿಯೇ ಬೇಕು. ನಿದ್ರೆಯಲ್ಲೇ ಇದ್ದಿಯೇನೋ ಎಂಬಂತೆ ದಿಂಬಿಗೆ ಒರಗಿ ಕುಳಿತು ದೊಡ್ಡ ಕಪ್ಪಿನ ತುಂಬಾ ಹಾಕಿಕೊಟ್ಟ ಕಾಫಿ ಕುಡಿಯುತ್ತಿಯ. ನಿನ್ನ ಕಡುಗಪ್ಪು ಕಣ್ಣು ನನಗೊಂದು Thanks ಹೇಳಿ ಕಿಟಕಿಯಾಚೆಗೆ ಹೊರಳುತ್ತವೆ. ಅವುಗಳಲ್ಲಿನ ಸೈಲೆನ್ಸ್ ನನಗೆ ತುಂಬ ಇಷ್ಟವಾಗುತ್ತದೆ. ಜಗತ್ತಿನೊಂದಿಗೆ ಯಾವುದೇ ದೂರು, ತಕರಾರುಗಳಿಲ್ಲದ ತಣ್ಣಗಿನ ಕಣ್ಣು ಅವು.

ಹಮ್ ನೇ ದೇಖೀ ಹೈಂ

ಇನ್ ಆಂಖೋಮೆ ಮೆಹಕತೇ ಖುಷಬೂ….

ಏಳುವ ತನಕ ತಕರಾರೇ ಹೊರತು ಎದ್ದ ಮೇಲೆ ನೀನು ಪಾದರಸ. ಬೆಚ್ವಗೆ ಗೀಝರಿನಲ್ಲಿ ಕಾದ ನೀರು ನಿನ್ನ ಬಂಡೆಗಲ್ಲಿನಂತಹ ಬೆನ್ನಿಗೆ ಚೆಲ್ಲಿ ಸೋಪು ಉಜ್ಜುತ್ತಿದ್ದರೆ ಕೈ ತಡವರಿಸುತ್ತದೆ. ಎದೆ, ಭುಜ, ತೋಳು-ವಿಗ್ರಹ ಕಣೋ ನೀನು.ಟವೆಲ್ಲು ಸುತ್ತಿ ಈಚೆಗೆ ಕರೆದುಕೊಂಡು ಬರುವ ಹೊತ್ತಿಗೆ ನನಗೇ ಅರ್ಧ ಸ್ನಾನ. ಇವೆಲ್ಲ ನನಗೆ Best moments of our life ಅನ್ನಿಸುತ್ತಿರುತ್ತದೆ. ಹತ್ತೋ, ಇಪ್ಪತ್ತೋ,ಐವತ್ತೋ ವರ್ಷಗಳಾದ ಮೇಲೆ ಹೇಗಿರುತ್ತೀವೋ ಗೊತ್ತಿಲ್ಲ ಚಿರಂತ್: ಈ ಕ್ಷಣಕ್ಕೆ ಮಾತ್ರ ಭಗವಂತ ಅತ್ಯಂತ ಶ್ರದ್ದೆಯಿಂದ ಕೂತು ಮದುವೆ ಮಾಡಿಸಿದ ಅದ್ಬುತ ದಂಪತಿಗಳಂತಿದ್ದೇವೆ. ಸ್ನಾನವಾದ ಮೇಲೆ ಹತ್ತು ನಿಮಿಷ ನೀನುಂಟು, ನಿನ್ನ ದೇವರುಂಟು. ಅಷ್ಟೊತ್ತಿಗೆ ಮಾಡಿಕೊಂಡು ತಂದ ತಿಂಡಿ ಬಿಸಿ ಮಾಡಿಕೊಂಡು ನಿನಗೋಸ್ಕರ ಎತ್ತಿಟ್ಟರೆ, ಮಗುವಿನ ಹಾಗೆ ಇಷ್ಟಿಷ್ಟೇ ತಿನ್ನುವ ನೀನು.

ಸಂಕೇತ್ ಮಿಲನ್ ಕಾ

ಭೂಲ್ ನ ಜಾನಾ

ಮೇರಾ ಪ್ಯಾರ್‍‌ನ ಬಿಸರಾನಾ…

ಹೊರಡುವ ಹೊತ್ತಿಗೆ ಬಾಗಿಲ ಮರೆಯಲ್ಲಿ ನಿಂತು ಬರಸೆಳೆದೆ ನೀನು ಕೊಡುವ ಮುತ್ತು, ಅದೇ ನನಗೆ ಸಂಜೆ ಕಾಲೇಜು ಮುಗಿಯುವವರೆಗಿನ ಮುತ್ತು ಬುತ್ತಿ. ಕಾಳೇಜಿನ ಬಳಿ  ಬೈಕು ನಿಲ್ಲಿಸಿ ಇಳಿಸಿ ಹೋಗುವ ನಿನ್ನನ್ನು, ತಿರುವಿನಲ್ಲಿ ಮರೆಯಾಗುವ ತನಕ ನೋಡುತ್ತಾ ನಿಲ್ಲುತ್ತೇನೆ. ಗೆಳತಿಯರು ಛೇಡಿಸುತ್ತಾರೆ. ಮೊದಲ ಪಿರಿಯಡ್‌ನಲ್ಲಿ ನಾನೆಲ್ಲೋ, ಮನಸೆಲ್ಲೋ, ಪಾಠವೆಲ್ಲೋ..? ಮದ್ಯಾಹ್ನ ಗೆಳತಿಯರೊಂದಿಗೆ ಕೂತು ಊಟ ಮಾಡುವಾಗ ನಿನು ಆಫೀಸಿನಲ್ಲಿ ಏನು ತರಿಸಿಕೊಂಡಿರುತ್ತೀಯೋ ಅಂತ ಯೋಚನೆ. ನೋಡ ನೋಡುತ್ತಾ ಸಂಜೆಯಾಗಿಬಿಡುತ್ತದೆ. ಇಳಿಸಿ ಹೋದ ಜಾಗದಲ್ಲೇ ನೀನು, ನಿನ್ನ ಬೈಕು.

ಜಬ್ ದೀಪ್ ಜಲೇ ಆನಾ

ಜಬ್ ಶಾಮ್ ಢಲೇ ಆನಾ

ದಿನಗಳು ಹೀಗೇ ಕಳೆದುಹೋಗಿ ಬಿಡುತ್ತವೇನೋ ಅಂತ ಕಳವಳಗೊಳ್ಳುತ್ತೇನೆ ಚಿರಂತ್. ನಂಗೊತ್ತು, ನಿನ್ನ ಮನಸ್ಸು ನನ್ನ ವಿಷಯದಲ್ಲಿ ನಿಚ್ಚಳ. ನಂಗೆ ಬೇಕು ಅಂದಿದ್ಯಾವುದನ್ನೂ ನೀನು ಇಲ್ಲವೆಂದಿಲ್ಲ. ಇರುವ ಅತ್ಯುತ್ತಮ ರೆಸ್ಟುರಾಂಟ್ಸ್ ಗೆ ಕರೆದುಕೊಂಡು ಹೋಗಿದ್ದೀಯ. ಕೇಳುವುದಿರಲಿ, ಸುಮ್ಮನೆ ಆಸೆ ಪಟ್ಟ ಪ್ರತಿಯೊಂದನ್ನೂ ತೆಗೆಸಿಕೊಟ್ಟಿದ್ದೀಯ. ನಾವು ಒಟ್ಟಿಗೆ ಹೋಗದ ಜಾಗಗಗಳಿಲ್ಲ. ಆದರೂ ಒಂದು ಮದುವೆ ಅಂತ ಆಗಿಬಿಟ್ಟರೆ ಮನಸ್ಸಿನ ಈ ಕಳವಳಗಳೂ ದೂರವಾಗುತ್ತವೇನೋ? ಅಪ್ಪ ಮೇಲಿಂದ ಮೇಲೆ ಎರಡು ಸಲ ಕರೆದು ಕೇಳಿದರು. ಒಮ್ಮೆ ನೀನು ಬಂದು ಮಾತನಾಡು. ನಿಜ ಹೇಳಲಾ ಚಿರಂತ್, ಕಳೆದ ತಿಂಗಳು ನಾನು ನೀರು ಹಾಕಿಕೊಂಡಿಲ್ಲ. ಕಿಬ್ಬೊಟ್ಟೆಯಾಳದಲ್ಲೆಲ್ಲೋ ಸಣ್ಣ ಹೊರಳು. ಇನ್ನು ತಡಮಾಡಬೇಡ ಕಣೋ….

-ನಿನ್ನವಳು.


’ಜಾಣ ಮರೀ ಜಪಾನಿಗೆ ಬರ್ತೀಯಾ’ ಅಂದ್ಲಂತೆ ಶೋಭಕ್ಕ

October 1, 2009

ಕೇಳಿ-೪

HDD

ಪ್ರಶ್ನೆ: ಪ್ರೀತ್ಸಿ ಕೈ ಕೊಡೋದು ಹುಡುಗೀರಾ ಹಾಬೀನಾ?

ಉ: ಇಲ್ಲಪ್ಪ! ಅದು ಪ್ರೊಫೆಷನ್ನು.

ಪ್ರಶ್ನೆ: ಗೌಡರ ಹೆಲಿಕಾಪ್ಟರು  ಧರೆಗೆ ಅಪ್ಪಳಿಸಿದರೆ?

ಉ: ಧರೆ ಮತ್ತು ಕಾಪ್ಟರ್‍-ಎರಡೂ ಡಿವೈಡ್ ಆಗ್ತವೆ!

ಪ್ರಶ್ನೆ: ಚೀನಾ ಪ್ರವಾಸದ ನಂತರ ಯಡ್ಡಿ ಬೇರೆ ಬೇರೆ ದೇಶಗಳಿಗೆ ಹೋಗ್ತಾರಂತಲ್ಲ?

ಉ: ’ಜಾಣ ಮರೀ ಜಪಾನಿಗೆ ಬರ್‍ತೀಯಾ’ ಅಂದ್ಲಂತೆ ಶೋಭಕ್ಕ

ಪ್ರಶ್ನೆ: ಈಗಲೂ ಬದಲಿಸಲಾಗದ ನಿನ್ನ ಕೆಟ್ಟ ಗುಣ ಯಾವುದು?

ಉ: ನೂರು ಸಲ ಮೋಸವಾದರೂ ನೂರ ಒಂದನೇ ಸಲ ನಂಬುವುದು

ಪ್ರಶ್ನೆ: ಗೌಡರು ಬಾಲ್ಯದಲ್ಲಿ ಅಂಥ ತುಂಟರೇನಾಗಿರಲಿಲ್ಲವಂತಲ್ಲ?

ಉ: ’ಅವರು ಹುಟ್ಟಿದ್ದೇ ವಯಸ್ಸಾದ ಮೇಲೆ’ ಎಂಬ ವಾದವೊಂದಿದೆ.

ಪ್ರಶ್ನೆ: ಕಡು ಬಡವನ ಸಾವಿಗೂ, ಪರಮ ಶ್ರೀಮಂತನ ಸಾವಿಗೂ ಏನು ವ್ಯತ್ಯಾಸ?

ಉ: ಇದಕ್ಕೆ ಹಂದಿಜ್ವರವೆಂದೂ, ಅದಕ್ಕೆ H1N1 ಎಂದೂ ಬರೆಯಲಾಗುತ್ತದೆ.

ಪ್ರಶ್ನೆ: ಕುಮಾರಣ್ಣ ಯಾಕೆ ಮತ್ತೆ ಪ್ಯಾಂಟ್ ಹಾಕಲು ಶುರು ಮಾಡಿದ್ದಾರೆ?

ಉ: ರೇವಣ್ಣ ಮೂಗಲ್ಲಿ ಬೆರಳಿಟ್ಟುಕೊಂಡು ಪಂಚೆಗೆ ಕೈ ಒರೆಸಿದನಂತೆ!

ಪ್ರಶ್ನೆ; ಶೋಭಾ ಕರಂದ್ಲಾಜೆಯವರು ಎಲ್ಲ ಫೋಟೋಗಳಲ್ಲೂ ನಗುತ್ತಿರಲು ಕಾರಣ?

ಉ:ಮ್ಯಾನುಫ್ಯಾಕ್ಚರಿಂಗ್ ಡಿಫೆಕ್ಟು!

ಪ್ರಶ್ನೆ:ಪಾಪ, ರಾಧಿಕಾ ಈ ಸಲ ಯಾರಿಗೂ ರಾಖಿ ಕಟ್ಟಲಿಲ್ಲವಂತೆ?

ಉ:ಪೋಸ್ಟಲ್ಲಿ ಕಳುಹಿಸಿದ್ದನ್ನ ಚೆನ್ನಿಗಪ್ಪ ಸೊಂಟಕ್ಕೆ ಕಟ್ಟಿಕೊಂಡು ತಿರುಗುತ್ತಿದ್ದಾನಂತೆ!.

ಪ್ರಶ್ನೆ: ಮೊನ್ನೆ ಮೊನ್ನೆಯಷ್ಟೆ ದೇವೇಗೌಡರು ಮನಬಿಚ್ಚಿ ನಕ್ಕರಂತೆ?

ಉ: ಸದಾನಂದ ಗೌಡರಿಗೆ ಹಂದಿಜ್ವರ ಅಂತ ರೇವಣ್ಣ ನಂಬಿಸಿದ್ದನಂತೆ?


ಇದು ಹದಿನೈದನೇ ವರ್ಷದ ಅಫಿಡವಿಟ್ಟು

September 30, 2009

rbimg

ದುಡ್ಡು ಕಾಸಿನ ವಿಷಯದ ಬಗ್ಗೆ ಹೇಳುವುದಾದರೆ, ಇದು ನಿವೃತ್ತಿಗೆ ಅಣಿಯಾಗುವ ಸಮಯ, ಮನುಷ್ಯ ಐವತ್ತೆಂಟಕ್ಕೆ ನಿವೃತ್ತಬಾಗಬೇಕು. ಆದರೆ ನಿನ್ನಂಥವನು ಯಾವತ್ತಿಗಾದರೂ ನಿವೃತ್ತನಾಗುವುದು ಸಾಧ್ಯವೇ ರವೀ, ಅಂತ ಗೆಳೆಯರು ತಮಾಷೆ ಮಾಡುತ್ತಾರೆ. ವೃತ್ತ ಪತ್ರಿಕೆಯವರಿಗೆ ನಿವೃತ್ತಿ ಇರುವುದಿಲ್ಲ ಎಂಬ ಮಾತು ಸತ್ಯ.

ಈ ವರ್ಷ ಒಂದು ವೋಕ್ಸ್ ವ್ಯಾಗನ್ ಕಾರು ಮತ್ತು ಆಫೀಸಿನ ಬಳಕೆಗಾಗಿ ಒಂದು ಮಾರುತಿ ಓಮ್ನಿ ಖರೀದಿಸಿದೆ. ಮಗಳ ಸೀಮಂತಕ್ಕೆ ಅಂತ ಖರೀದಿಸಿದ ಚಿನ್ನದ ಬೆಲೆ ಒಂದೂವರೆ ಲಕ್ಷ ರುಪಾಯಿ ಯಷ್ಟಾಯಿತು. ಇಂಗ್ಲೆಂಡಿನಿಂದ ಹಿಂತಿರುಗಿದ ನನ್ನ ಮಗ ಕರ್ಣ ತಾನೊಂದು ವೋಕ್ಸ್ ವ್ಯಾಗನ್ ಕಾರು ಖರೀದಿಸಿದ್ದಾನೆ. ಉಳಿದಂತೆ, ರಿಸೆಷನ್ ಕಾರಣವೋ ಏನೋ, ಹೆಚ್ಚಿನ ಖರೀದಿಗಳಾಗಿಲ್ಲ. ಹಾಗೆ ಹೇರಳವಾಗಿ ನಾನು ಖರೀದಿಸಿರುವ ವಸ್ತುಗಳೆಂದರೆ ಟೀವಿ ಕಾರ್ಯಕ್ರಮಗಳಿಗಾಗಿ ಹೊಸ ಷರ್ಟುಗಳು, ಪುಸ್ತಕಗಳು ಮತ್ತು ಸಂಗೀತದ ಸಿ.ಡಿ ಗಳು. ಆಸ್ತಿ ಖರೀದಿಯ ಗೋಜಿಗೆ ಈ ಸಲ ಹೋಗಲಿಲ್ಲ.

ಪದ್ಮನಾಭ ನಗರದ ’ಅಮ್ಮ’ ಮನೆ ಹಾಗೂ ಒಂದು ಫ್ಲಾಟ್ ಭಾವನಾಗೆ ಉಡುಗೊರೆಯಾಗಿ ಕೊಟ್ಟಿದ್ದೇನೆ. ಶೇಷಾದ್ರಿಪುರದ ಮನೆಯನ್ನು ಚೇತನಾಗೆ ಉಡುಗೊರೆಯಾಗಿ ಕೊಟ್ಟಿದ್ದೇನೆ. ಬನಶಂಕರಿಯ ಮನೆ ’ಅಮ್ಮೀಜಾನ್’ ಅವತ್ತಿಗೂ ಇವತ್ತಿಗೂ ಲಲಿತೆಯ ಸುಪರ್ದಿಯಲ್ಲಿದೆ. ನಾನು ಕುಳಿತು ಕೆಲಸ ಮಾಡುವ ಆಫೀಸು ಸ್ವಂತದ್ದು. ಇಲ್ಲಿ ಸುಮಾರು ಏಳು ಕಂಪ್ಯೂಟರ್‍‌ಗಳ ಖರೀದಿಯಾಗಿದೆ. ನಿವೇದಿತಾಳ ಮನೆಯೊಂದನ್ನು ನಾನು ಖರೀದಿಸಿದ್ದೇನೆ. ಬ್ಯಾಂಕಿನಲ್ಲಿ ಕೊಂಚ ಸಾಲವಿದೆ. ನನ್ನ ದುಡಿಮೆ ಅದನ್ನು ತೀರಿಸುತ್ತಿದೆ.

’ಹಾಯ್ ಬೆಂಗಳೂರ್‍!’ ಮತ್ತು ’ಓ ಮನಸೇ..’ ಎರಡೂ ಲಾಭದಲ್ಲಿದೆ. ಪ್ರತೀ ತಿಂಗಳು ಪತ್ರಿಕೆಯ ಸಿಬ್ಬಂದಿಗೆ ನಾನು ಕೊಡುವ ಸಂಬಳ ಐದು ಲಕ್ಷ ರುಪಾಯಿ. ಅತಿ ಹೆಚ್ಚಿನ ಸಂಬಳ ಪಡೆಯುತ್ತಿರುವಾಕೆ ನಿವೇದಿತಾ.

ನೀವೆಲ್ಲಕೊಟ್ಟ ಹಣದಿಂದ ನಾನು ಕಟ್ಟಿದ ಶಾಲೆ ’ಪ್ರಾರ್ಥನಾ’. ಇವತ್ತು ಅಲ್ಲಿ ೫೫೦೦ ಮಕ್ಕಳು ಓದುತ್ತಿದ್ದಾರೆ. ಸುಮಾರು ೩೦೦ ಜನ ಸಿಬ್ಬಂದಿಯವರಿದ್ದಾರೆ. ಅವರಿಗೆ ನಾವು ಪ್ರತಿ ತಿಂಗಳು ಕೊಡೆ ಮಾಡುವ ಸಂಬಳ ಹದಿನೇಳು ಲಕ್ಷ ರೂಪಾಯಿ. ನಾಲ್ಕು ಸ್ವಂತ ಕಟ್ಟಡಗಳಲ್ಲಿ, ಒಂದು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿರುವ ’ಪ್ರಾರ್ಥನಾ’ ತನ್ನ ಸಾಲ ತೀರಿಸಿಕೊಂಡು ಲಾಭದಲ್ಲಿ ನಡೆದಿದೆ. ಅದರ ಲಾಭವನ್ನೆಲ್ಲ ಶಾಲೆಯ ಮೇಲೆಯೇ ಮತ್ತೆ ತೊಡಗಿಸುವ ಸಂಪ್ರದಾಯ ಮುಂದುವರೆಸಿಕೊಂಡು ಬಂದಿದ್ದೇನೆ.

ನನ್ನಲ್ಲಿ ಕಪ್ಪು ಹಣವಿಲ್ಲ. ’ಪತ್ರಿಕೆ’ ಪ್ರಾರಂಭವಾದಾಗಿನಿಂದ ನಿಗದಿತವಾಗಿ ಆದಾಯ ತೆರಿಗೆ ತುಂಬುತ್ತಿದ್ದೇನೆ. ಪತ್ರಿಕೆಗಳು, ಟೀವಿ ಕಾರ್ಯಕ್ರಮ, ಪುಸ್ತಕ ಪ್ರಕಾಶನ ಇವುಗಳಿಂದ ಬರುವ ಲಾಭಕ್ಕೆ ಈ ಬಾರಿ ನಾನು ತುಂಬಿರುವ ಆದಾಯ ತೆರಿಗೆ ೫೨.೪೭ ಲಕ್ಷ ರುಪಾಯಿಗಳು.

ನೀವು ಕೊಡುವ ಹಣದಲ್ಲೇ ’ಸೀತಾನದಿ ಸುರೇಂದ್ರನ ಹೆಸರಿನ ಸ್ಕಾಲರ್‌ಷಿಪ್ ಯೋಜನೆ’ ಮುಂದುವರೆದಿದೆ. ಆ ಹಣದಲ್ಲಿ ಕೆಲವು ಬಡ ಪ್ರತಿಭಾವಂತ ಮಕ್ಕಳು ಪಿ.ಯು.ಸಿ, ಬಿ.ಇ, ಎಂ.ಬಿ.ಬಿ.ಎಸ್, ಮುಂತಾದ ಕೋರ್ಸುಗಳಿಗೆ ಓದುತ್ತಿದ್ಧಾರೆ. ಅದೇ ಲಾಭದ ಹಣದಲ್ಲಿ ಕಿಡ್ನಿ ಕಾಯಿಲೆಯವರಿಗೆ, ಕ್ಯಾನ್ಸರ್‍ ರೋಗಿಗಳಿಗೆ, ಅನಾಥ ವೃದ್ದರಿಗೆ, ಎಚ್.ಐ.ವಿ ಸೋಂಕು ತಗುಲಿದವರಿಗೆ ಉಚಿತವಾಗಿ ಔಷಧಿ ಕೊಡಿಸುತ್ತಿದ್ದೇನೆ.

ಲೆಕ್ಕಾಚಾರದ ವಿಷಯದಲ್ಲಿ ನ್ನಿಂದ ಪೊರಪಾಟುಗಳಾಗಿರಬಹುದು. ಆದರೆ ಲೆಕ್ಕ ಪತ್ರದ ವಿಷಯದಲ್ಲಿ ಎಲ್ಲವೂ ನಿಸೂರು. ನಮ್ಮ ಸಂಸ್ಥೆಗಳ ಪ್ರತಿ ನೌಕರನಿಗೂ ಪ್ರಾವಿಡೆಂಟ್ ಫಂಡ್ ದೊರೆಯುತ್ತದೆ.

ನನಗೆ ದಕ್ಕುತ್ತಿರುವುದು: ಸಮಾಧಾನ.

-ಬೆಳಗೆರೆ


ಓ ಮನಸೇ ಎಪ್ಪತ್ಮೂರನೇ ಸಂಚಿಕೆ ಇದೀಗ ಮಾರುಕಟ್ಟೆಯಲ್ಲಿ

September 3, 2009

ಓ ಮನಸೇ..೭೩

ಇದೆಂಥ ವಿಚಿತ್ರವೋ!

ಎರಡು ತಲೆಯ ಹಾವಿಗೆ, ಹದಿನಾರು ಕಾಲುಗಳ ಆಮೆಗೆ, ಕರಿ ಬೆಕ್ಕಿಗೆ, ಎಡಮುರಿ ಅಥವಾ ಬಲಮುರಿ ಶಂಖಕ್ಕೆ ಕೋಟಿ ಕೋಟಿ ರುಪಾಯಿ ಸಿಗುತ್ತಾ?

’ಸಿಗುತ್ತೇನೋ’ ಅಂತ ಅವುಗಳ ಬೆನ್ನು ಬಿದ್ದವರೆಷ್ಟೋ?

ಹಾಗಾದ್ರೆ, ಎರಡು ತಲೆ ಹಾವಿರೋದು ನಿಜಾನಾ ?

ಕರಿಬೆಕ್ಕಿನ ನಾಲಗೆ ಕಪ್ಪಗೇ ಏಕಿರಬೇಕು?

ಆ ಐನೂರು ನಾಣ್ಯಗಳು ಸಿಕ್ಕಿಬಿಟ್ಟರೆ ಇಂದಿರಾಗಾಂಧಿಯ ಸ್ವಿಸ್ ಬ್ಯಾಂಕ್ ಅಕೌಂಟ್ ನಂಬರ್‍ ಸಿಗುತ್ತಾ?

ಈ ಸಲದ ಓ ಮನಸೇ ಅತ್ಯಂತ ಕುತೂಹಲಭರಿತವಾಗಿದೆ.

ಜೊತೆಗೇ…

  • ’ಲವ್ ಲಿಕ್ವಿಡ್’ ಎಂಬ ಮಧುರ ಔಷಧ!
  • ಗ್ರಾಮೋಫೋನ್ ಯುಗದ ಸಾಮ್ರಾಜ್ಞಿ ಶಂಷಾದ್ ಬೇಗಂ!
  • ಜಗದ್ವಿಖ್ಯಾತ ಪತ್ರಿಕೆ ರೀಡರ್‍ಸ್ ಡೈಜೆಸ್ಟ್ ಮುಚ್ಚಿ ಹೋಗುತ್ತಾ?
  • ಮಹಿಳೆಯರು ಹತ್ತು ಜನ ಹೇಳಿದ್ದನ್ನೇ ಯಾಕೆ ಹೇಳ್ತಾರೆ?
  • ಇನ್ನೂ ಅಷ್ಟು ವಿಷಯ ವೈವಿಧ್ಯತೆಗಳು.

ಬದುಕಿನ ಪಾಸಿಟಿವ್ ಸೈಡನ್ನೇ ಹೆಚ್ಚಾಗಿ ಹೇಳುವ ’ಓ ಮನಸೇ’ ಖಂಡಿತಾ ನಿಮ್ಮ ಕುತೂಹಲಗಳಿಗೆ ಕನ್ನಡಿಯಾಗುತ್ತದೆ.

ಓ ಮನಸೇ ಓದಿ, ನಿಮ್ಮ ಸ್ನೇಹಿತರಿಗೂ ಪರಿಚಯಿಸಿ


ಕಳೆದ ವಾರ ಬಂದಿದ್ದ ಮೆಸೇಜು ಓದಿದ ಮೇಲೆ!

September 3, 2009

ಓ ೭೩

’ಉಹುಂ, ಸಾಲದು. ’ಓ ಮನಸೇ…’ ಪತ್ರಿಕೆಯಲ್ಲಿ ಇನ್ನೂ ಉತ್ತಮ ಮಟ್ಟದ ಲೇಖನಗಳನ್ನು ನಿರೀಕ್ಷಿಸುತ್ತೇನೆ’ ಎಂದು ಅಪರಿಚಿತ. ಅಗೋಚರ ಓದುಗರೊಬ್ಬರು ನನಗೆ ಕಳೆದ ವಾರ ಮೆಸೇಜ್ ಕಳುಹಿಸಿದ್ದರು. ಅಲ್ಲಿಂದ ಶುರುವಾಯಿತು ನನ್ನ ಚಡಪಡಿಕೆ. ನೀವು ಎಷ್ಟರ ಮಟ್ಟಿಗೆ ನಂಬುತ್ತೀರೋ ಬಿಡುತ್ತೀರೋ ಗೊತ್ತಿಲ್ಲ: ನನ್ನ ಪತ್ರಿಕೆಯ ನಿಲುವನ್ನು ಯಾರಾದರೂ ಖಂಡಿಸಿದರೆ ನಾನು ಅದನ್ನು ಸ್ವಾಗತಿಸುತ್ತೇನೆ, ಟೀಕಿಸಿ ಬರೆದ ಪತ್ರಗಳನ್ನು ಶ್ರದ್ದೆಯಿಂದ ಓದಿಕೊಳ್ಳುತ್ತೇನೆ. ನಾನು ತಪ್ಪು ಮಾಡಿದ್ದೇನೆ ಅಂತ ಓದುಗ ಸೂಚಿಸಿದಾಗ ತಿದ್ದುಕೊಳ್ಳುತ್ತೇನೆ, ಕ್ಷಮೆ ಕೇಳುತ್ತೇನೆ. ಆದರೆ ನಾನು ಕೈಗಿತ್ತ ’ಪತ್ರಿಕೆ’ ಸಂತೃಪ್ತಿಕರವಾಗಿಲ್ಲ ಅನ್ನಿಸಿದಾಗ ಮಾತ್ರ ತಳಮಳಗೊಂಡು ಬಿಡುತ್ತೇನೆ. ಅದು ನನ್ನ Product. ಕಳೆದ ಇಪ್ಪತ್ತೈದು ಮೂವತ್ತು ವರ್ಷಗಳಲ್ಲಿ ನಾನು ಮಾಡಿದ ಅತ್ಯಂತ ಶ್ರದ್ದಾವಂತ ಕೆಲಸವೆಂದರೆ, ಬರವಣಿಗೆಯೊಂದೇ. ನನ್ನ ಈ ಕೆಲಸದ ಬಗ್ಗೆ ನಾನು ಭಯಂಕರ ಪೊಸೇಸೀವ್. ಅಷ್ಟೂ ನಾನೇ ಬರೆಯಬೇಕು, ನನ್ನ ಕಣ್ತಪ್ಪಿ ಯಾವುದೂ ಪ್ರಿಂಟಿಗೆ ಹೋಗಬಾರದು, ಎಲ್ಲೂ ರುಚಿ ಕೆಡಬಾರದು ಅಂತ ಹಟಕ್ಕೆ ಬೀಳುವುದರಿಂದಲೇ ಕೆಲವೊಮ್ಮೆ ಪತ್ರಿಕೆ, ಪುಸ್ತಕ ತಡವಾಗಿ ಅಚ್ಚಿಗೆ ಹೋಗುತ್ತವೆ. ಅದರಿಂದ ಪ್ರಸಾರ ಸಂಖ್ಯೆಯ ಮೇಲೆ ಪರಿಣಾಮವಾಗುತ್ತದೆ ಅಂತ ನಿವೇದಿತಾ ಬಯ್ಯುತ್ತಾಳೆ. ಆದರೆ ಕಳೆದ ಹದಿನೈದು ವರ್ಷಗಳಲ್ಲಿ ನಾನು ನನ್ನ ಓದುಗರನ್ನು ಕಳೆದುಕೊಂಡಿಲ್ಲ. ಹೋಟೇಲಿನ ಬಾಗಿಲು ತೆರೆಯುವುದು ಕೊಂಚ ತಡವಾದರೇನಂತೆ? ಕಾಫಿಯ ಸೊಗಸು ನಿರೀಕ್ಷಿಸಿದಂತೇ ಇದ್ದರೆ ಬೇಸರಿಸದ ದೊರೆ, ಕಾಫಿ ಕುಡಿದುಕೊಂಡೇ ಮುನ್ನಡೆಯುತ್ತಾನೆ.

ಅದಿರಲಿ, ಕಳೆದವಾರ ಬಂದ ಮೆಸೇಜು ನನ್ನನ್ನು ನಿಜಕ್ಕೂ ತಳಮಳಕ್ಕೆ ಈಡು ಮಾಡಿತ್ತು. ಒಂದು ಸಲ ಕುಳಿತು ಹಳೆಯ ಸಂಚಿಕೆಗಳನ್ನೆಲ್ಲ ತಿರುವಿ ಹಾಕಿದೆ. ಓದುಗ ದೊರೆ ಯಾವುದನ್ನು miss ಮಾಡಿಕೊಳ್ಳುತ್ತಿದ್ದಾನೆ ಅಂತ ಗಮನಿಸಿದೆ. ಆಮೇಲೆ ಬೇರೆ ಬೇರೆ ಭಾಷೆಗಳ ಕೆಲವು ಪತ್ರಿಕೆಗಳನ್ನು ತರಿಸಿಕೊಂಡು ನೋಡಿದೆ. ಇಂಟರ್‍‌ನೆಟ್‌ನಲ್ಲಿ ಸಿಗುವ ವಿಶೇಷ ಮ್ಯಾಗಝೀನ್‌ಗಳನ್ನು ಓದಿಕೊಂಡೆ. ಆ ನಂತರವೇ ನಾನು ’ಓ ಮನಸೇ..’ ಪತ್ರಿಕೆಯ ೭೩ ನೇ ಸಂಚಿಕೆಯ ಸೃಷ್ಟಿಗೆ ಕುಳಿತಿದ್ದು. ಈಗಾಗಲೇ ಅದು ಮಾರುಕಟ್ಟೆಯಲ್ಲಿದೆ. ನೀವು ಪ್ರೀತಿಯಿಂದ ಓದುತ್ತೀರಿ ಎಂಬ ವಿಶ್ವಾಸ ನನಗಿದೆ. ಸಧಬಿರುಚಿಯ, ವಿಷಯ ವೈವಿದ್ಯತೆಯುಳ್ಳ ಆ ಪತ್ರಿಕೆ ಬೆಳೆಯಬೇಕು. ನನ್ನ ನಂತರವೂ ಅದು ನನ್ನ ನೆನಪಾಗಿ ಉಳಿಯಬೇಕು.

ನಿಮ್ಮಲ್ಲಿ ಮತ್ತೆ ಅದನ್ನೇ ವಿನಂತಿಸಿಕೊಳ್ಳುತ್ತೇನೆ. ನಿಮ್ಮ ಮೂವರ ಮಿತ್ರರಿಗೆ ’ಓ ಮನಸೇ…’ ಪತ್ರಿಕೆಯನ್ನು ಪರಿಚಯಿಸಿ.

-ಬೆಳಗೆರೆ


ನಂಗ್ಯಾವತ್ತೂ ಯಾಕೆ ಬೋರು ಹೊಡಿಯಲ್ಲ…

September 3, 2009

bored_man

“I was never bored because I was never being bored” ಅಂತ ಒಂದು ಅದ್ಬುತವಾದ ಮಾತಿದೆ. ಪದೇಪದೆ ಓದಿಕೊಂಡರೆ ನಿಮಗೇ ಈ ಸೆಂಟೆನ್ಸು ಸರಿಯಾಗಿ ಅರ್ಥವಾದೀತು.

’ತುಂಬಾ ಬೋರು’ ಅನ್ನುವುದು ಆಗೊಮ್ಮೆ ಈ ಗೊಮ್ಮೆ ಎಲ್ಲರಿಗೂ ಅನುಭವಕ್ಕೆ ಬರುವಂತಹುದೇ. ಆದರೆ ನಿರಂತರವಾಗಿ ಬೋರಿ ಅನುಭವಿಸುವ ಜನ ಇರುತ್ತಾರಲ್ಲ? ಗಮನಿಸಿ ನೋಡಿದರೆ ಅವರೇ ಪರಮ ಬೋರಿಂಗ್ ಪಾರ್ಟಿಗಲಾಗಿರುತ್ತಾರೆ. ತಮ್ಮ ಬೋರು ಜಾಡ್ಯವನ್ನು ಕೈಗೆ ಸಿಕ್ಕ, ಎದುರಿಗೆ ಬಂದ, ಜೊತೆಯಲ್ಲಿ ಕುಳಿತ ಪ್ರತಿಯೊಬ್ಬರಿಗೂ ಹಂಚಿ ಪರಚುವುದೇ ಪರಧರ್ಮ ಎಂಬಂತೆ ವರ್ತಿಸುತ್ತಿರುತ್ತಾರೆ. ತಮಗೆ ತಾವು ಬೋರ್‍ ಆಗದಿರುವವರು, ಇನ್ನೊಬ್ಬರಿಗೆ ಬೋರ್‍ ಆಗಲಾರರು? ಇನ್ನೊಬ್ಬರಿಗೆ ವಿಪರೀತ ಬೋರು ಹೊಡೆಸುವವರು ತಮ್ಮನ್ನು ತಾವು ಸಂತೋಷವಾಗಿ ಇರಿಸಿಕೊಳ್ಳಲಾರರು! ಇದು ಬದುಕಿನ ಅನಿವಾರ್ಯ ನಿಯಮ.

ಹಾಗಾದರೆ ಬೋರ್‍ ಆಗದಂತಿರಬೇಕು ಅಂದರೆ ಏನು ಮಾಡಬೇಕು?

ಮುಖ್ಯವಾಗಿ, ನಮ್ಮ ವ್ಯಕ್ತಿತ್ವವನ್ನು ಇಂಟರೆಸ್ಟಿಂಗ್ ಆಗಿ ಇಟ್ಟುಕೊಳ್ಳಬೇಕು. ಸಾಮಾನ್ಯವಾಗಿ ನಾವೆಲ್ಲ ಒಳ್ಳೆಯ ಮಾತುಗಾರರು ಅಂತ ನಮಗೆ ನಾವೇ ಅಂದುಕೊಂಡು ಬಿಟ್ಟಿರುತ್ತೇವೆ. ಆದರೆ ಒಳ್ಳೆಯ ಮಾತುಗಾರ, ಒಳ್ಳೆಯ ಕೇಳುಗನೂ ಆಗಿರಬೇಕು ಎಂಬ ರೂಲ್ಸು ಮರೆತು ಬಿಟ್ಟಿರುತ್ತೇವೆ. ಹೀಗಾಗಿ ಸುಮ್ಮನೇ ಮಾತಾಡುತ್ತಾ ಹೋಗುತ್ತೇವೆ. ಒಂದು ಚಿಕ್ಕ, ಆರೋಗ್ಯವಂತ ನಿಗೂಢತೆ (not in negative sense) ಉಳಿಸಿಕೊಳ್ಳುವುದೇ ಇಲ್ಲ. ಮಾತಾಡುತ್ತಾ ಆಡುತ್ತಾ, ಬಟಾ ಬಯಲಾಗಿ ಹೋಗುತ್ತೇವೆ.

ಆದರೆ ಬೋರ್‍ ಆಗದಂಥ ವ್ಯಕ್ತಿತ್ವ ರೂಪಿಸಿಕೊಳ್ಳುವುದೆಂದರೆ ಕೇವಲ ಚೆಂದಾಗಿ ಮಾತನಾಡುವುದು ಮತ್ತು ಚೆನ್ನಾಗಿ ಕೇಳಿಸಿಕೊಳ್ಳುವುದು ಎಂದಷ್ಟೇ ಅರ್ಥವಲ್ಲ. ಅತ್ಯಂತ ಕಡಿಮೆ ಮಾತನಾಡುವವನೂ, ಮಹಾ ಮೌನಿಯೂ ಕೂಡ ಇಂಟರೆಸ್ಟಿಂಗ್ ಆಗಿರಬಲ್ಲ. ಸುಮ್ಮನೇ ಅರ್ಥಹೀನ ತಮಾಷೆ ಮಾಡುವವನು ಕೇವಲ ಜೋಕರ್‍ ಅನ್ನಿಸಿಕೊಂಡುಬಿಡುವ ಅಪಾಯವಿದೆ. ಆದ್ದರಿಂದ ಮಾತಿನಿಂದಾಚೆಗೂ ನಮ್ಮ ವ್ಯಕ್ತಿತ್ವವನ್ನು ರುಚಿಕಟ್ಟಾಗಿಸಿಕೊಳ್ಳಬೇಕು. ನೂರಾರು ಸಂಗತಿಗಳನ್ನು ತಿಳಿದುಕೊಂಡಿರಬೇಕು. ಹೀರೇಕಾಯಿಯ ಸಿಪ್ಪೆಯಲ್ಲಿ ಚಪ್ಪರಿಸಿ ತಿನ್ನುವಂತಹ ಚಟ್ನಿ ಮಾಡುವುದು ಹೇಗೆ ಎಂಬುದರಿಂದ ಹಿಡಿದು, ಗೂಗಲ್ ಸರ್ಚ್ ಮಷಿನ್ ಹೇಗೆ ಕೆಲಸ ಮಾಡುತ್ತದೆ ಎಂಬುದರ ತನಕ ಎಲ್ಲವನ್ನೂ ತಿಳಿದುಕೊಳ್ಳುವ ಆಸಕ್ತಿ ಬೆಳೆಸಿಕೊಂಡರೆ ಸಾಕು, ಕ್ರಮೇಣ ನಾವು ಇಂಟರೆಸ್ಟಿಂಗ್ ಆಗಿ ಬಿಡುತ್ತೇವೆ.

ಮಕ್ಕಳು ತಾಯಿಯಿಲ್ಲದ ವೇಳೆ ಅಡುಗೆ ಮನೆ ಹೊಕ್ಕು ತಿನ್ನಲು ಏನಾದರೂ ಸಿಗುತ್ತಾ ಅಂತ ಡಬ್ಬಿ ಡಬ್ಬಿ ಹುಡುಕುತ್ತಿರುತ್ತವೆ, ಗಮನಿಸಿದ್ದೀರಾ? ನನ್ನದು ಇವತ್ತಿಗೂ ಅದೇ ಮನಸ್ತತ್ವ. ಓದಲಿಕ್ಕೆ ಏನಾದರೂ ಸಿಗುತ್ತದಾ ಅಂತ ಅಂಗಡಂಗಡಿ, ಷೆಲ್ಪು ಷೆಲ್ಪು, ನನ್ನ ಲೈಬ್ರೆರಿಯ ರಾಕ್ ರಾಕು, ಇಂಟರ್‍‌ನೆಟ್ಟಿನ ಸೈಟು ಸೈಟು ಹುಡುಕುತ್ತಿರುತ್ತೇನೆ. ನನ್ನ ಇಡೀ ಚಟುವಟಿಕೆ ನೋಡಿದರೆ, ದಿನವಿಡೀ ಕಾಡುವ ಹಸಿವೆಯಿಂದ ತಪ್ಪಿಸಿಕೊಳ್ಳುವ ’ಅಮ್ಮಾ ತಾಯಿ’ ಹುಡುಗನೊಬ್ಬ ಮನೆ ಮನೆ ತಿರುಗುವ ದೃಶ್ಯವನ್ನದು ಹೋಲಬಹುದು.

ನಂಗೊತ್ತು, ಎಲ್ಲರ ಮನೆಯಲ್ಲೂ ಪುಸ್ತಕಗಳಿದ್ದೇ ಇರುತ್ತವೆ. ಆದರೆ ಇರುವ ಎಲ್ಲಾ ಪುಸ್ತಕಗಳನ್ನು ನಾವು ಓದಿರುವುದಿಲ್ಲ. ಊರಲ್ಲಿನ ಸಾರ್ವಜನಿಕ ಪುಸ್ತಕಾಲಯವನ್ನು ಒಳಹೊಕ್ಕು ನೋಡಿರಿಯೇ ಇರುವುದಿಲ್ಲ. ಸಿನೆಮಾ ಹಾಡುಗಳ ಹಂತ ದಾಟಿ ಹೋಗಿ, ವಚನ-ಶಾಸ್ತ್ರೀಯ ಸಂಗೀತ, ಗಝಲು, ಠುಮರಿ ಕೇಳಿರುವುದಿಲ್ಲ. ಎದುರಿಗೆ ಯಾರು ಸಿಕ್ಕರೂ “ನನ್ಗಂಡ ನನ್ನನ್ನ ಪ್ರೀತ್ಸಲ್ಲ ಗೊತ್ತಾ?” ಅಂತ ಪರಚುತ್ತೇವೆಯೋ ಹೊರತು, ನಾನು ಇತ್ತೀಚೆಗೆ ಓದಿದ ಬಯೋಗ್ರಫಿಯೊಂದರ ಒಂದು ಛಾಪ್ಟರ್‍ ಎಷ್ಟೊಂದು ಇಂಟರೆಸ್ಟಿಂಗ್ ಆಗಿತ್ತು ಗೊತ್ತಾ. ಅಂತ ಮಾತಿಗಿಳಿರುವ ಸಿದ್ದರೆ ಮಾಡಿಕೊಂಡೇ ಇರುವುದಿಲ್ಲ.

ಇಂಟರೆಸ್ಟಿಂಗ್ ಆಗಿರುವುದು ಅಂದರೆ ತುಂಬ ಚೆನ್ನಾಗಿರುವುದು ಅಂತ ಅಲ್ಲ. ಹಲಸಿನ ಹಣ್ಣು ನಿಜಕ್ಕೂ ನೋಡಲಿಕ್ಕೆ ಚೆನ್ನಾಗಿರುವುದಿಲ್ಲ. ಆದರೆ ಯಾವತ್ತಾದರೂ ರುಚಿಹೀನ ಘಮಹೀನ ಹಲಸಿನ ತೊಳೆ ತಿಂದಿದ್ದೀರಾ?

Be interesting.

-ಬೆಳಗೆರೆ


ಈ ನೆನಪು ಇನ್ನು ಶಾಶ್ವತ

August 25, 2009
Photo0197

ಬೆಳಗೆರೆಯವರೊಂದಿಗೆ

ಕನಸುಗಳನ್ನು ಬೆನ್ನಟ್ಟಿ ಹೋಗುವುದೇ ಜೀವನ…ಈ ರೀತಿ ಆಸೆಯಿಂದ ಅರಸಿಹೋದ ಕನಸೊಂದು ನನಸಾದಾಗ..ನನಸಾದ ಆ ಕ್ಷಣದ ನೆನಪು ಉಳಿಯುವುದು ಚಿರಕಾಲ. ಬೆಳಗೆರೆಯವರನ್ನು ಮುಖತಃ ಭೇಟಿಯಾಗಬೇಕೆಂಬ ನನ್ನ ಹಂಬಲಕ್ಕೆ ಕನಸಿಗೆ ಕಡೆಗೂ ಕಾಲ ಒದಗಿಬಂದಿತ್ತು. ಆಗಸ್ಟ್ ೨೪ ರ ಸೋಮವಾರದಂದು ನನ್ನ ಜೀವನದ ಮರೆಯಲಾಗದ ದಿನ. ನಾನು ಸಾಮಾನ್ಯವಾಗಿ ಅದೃಷ್ಟದ ಸಂಖ್ಯೆಗಳನ್ನು ನಂಬುವುದಿಲ್ಲ. ಆದರೂ ಈ ೨೪ ನನ್ನ ಹಲವು ತಿರುವುಗಳಿಗೆ ಸಂತೋಷಗಳಿಗೆ ಸಾಕ್ಷಿಯಾಗಿದೆ. ನಾನು ವಿವಾಹವಾಗಿ, ನನ್ನ ಬಾಳ ಸಂಗಾತಿ, ಒಲುಮೆಯ ಗೆಳತಿ ಸುನಿತಾ ನನ್ನ ಬಾಳಿಗೆ ಬಂದ ದಿನ ಅಕ್ಟೋಬರ್‍ ೨೪, ಅಂತೆಯೇ ನನ್ನ ಜೀವದ ಗೆಳತಿಯಾಗಿ ತನ್ನ ಪುಟ್ಟ ಪುಟ್ಟ ಬೆರಗು ಕಣ್‌ಗಳೊಂದಿಗೆ ಈ ಭುವಿಗೆ ನನ್ನ ಮಗಳು ಬಂದಿದ್ದು ಜುಲೈ ೨೪, ಇನ್ನು ಈಗ ನಾ ಹೇಳ ಹೊರಟಿರುವ ದಿನ ಸಹಾ ಆಗಸ್ಟ್ ೨೪.

ಬೆಂಗಳೂರಿನ ಪದ್ಮನಾಭ ನಗರದ ಬೀದಿಯಲ್ಲಿ ನಡೆದು ಬರುತ್ತಿದ್ದವನಿಗೆ ಏನೋ ಆವೇಗ, ಮೊದಲ ಪ್ರೀತಿ ಹೇಳ ಹೊರಟಿರುವ, ತನ್ನ ಪ್ರಿಯತಮೆಗಾಗಿ ಬರೆದ ಪ್ರೇಮಪತ್ರವನ್ನು ಜೇಬಿನಲ್ಲಿರಿಸಿಕೊಂಡು ಪತ್ರವನ್ನು ನೀಡುತ್ತೇನೋ..ಇಲ್ಲವೋ ಒಂದೂ ತಿಳಿಯದೇ ನಿಧಾನವಾಗಿ ಸಾಗುತ್ತಿರುವ ಹುಡುಗನಂತೆ ಮನಸ್ಸು ಢವ ಢವ…ಸಣ್ಣಗಿನ ತುಂತುರು ಮಳೆ ನಿಧಾನವಾಗಿ ರಸ್ತೆಗಳನ್ನು ಕಟ್ಟಡಗಳನ್ನು ಆವರಿಸ ತೊಡಗಿತ್ತು. ಮಳೆ ತನ್ನೊಡನೆ ಹೊತ್ತು ತಂದ ತಂಗಾಳಿ ಎಂಥದೋ ಅಧ್ಬುತ ಹಿತವನ್ನು ನೀಡುತ್ತಿತ್ತು. ಈ ಸೋನೆ ಮಳೆ ಹಾಗೂ ತಂಗಾಳಿಗೆ ಸೋತ ಮನಸ್ಸು ನೆನಪುಗಳ ಬೆನ್ನೇರುತ್ತಿತ್ತು.  ಕೆಂಪು ಚೂಡಿದಾರ್‍ ಧರಿಸಿ, ಮೊಳದುದ್ದದ ಪುಸ್ತಗಗಳನ್ನು ಎದೆಗವಚಿಕೊಂಡು ಹೋಗುತ್ತಿದ್ದ ಅವಳ ನೆನಪು ಪದೇ ಪದೇ ಮೂಡುತ್ತಿತ್ತು. ಗಾಳಿಗೆ ಅತ್ತ ಇತ್ತ ಹೋಗುತ್ತಿದ್ದ ಅವಳ ಮುಂಗುರುಳ ಮೇಲಿನ ಅವಳ ಬೆರಳುಗಳು ನನ್ನನ್ನೇ ಕರೆದಂತೆ, ನಾ ಅವಳ ಹಿಂದೆಯೇ ಸಾಗುತ್ತಿದ್ದೆ. ನನ್ನಲ್ಲಿ ನೂರು ಮಾತು ಮನದಲ್ಲಿ ಹುಟ್ಟಿ ಗಂಟಲಲ್ಲೇ ಮೌನವಾಗುತ್ತಿತ್ತು…ಬೆಳ್ಳಂ ಬೆಳಗಿನ ಜಾವಕ್ಕೆ ಸೂರ್ಯನ ಎಳೆ ಕಿರಣಗಳಿಂದಲೇ ಜಳಕವಾಡಿ ಬಂದಂತಿದ್ದ ಅವಳ ಸೌಂದರ್ಯ ನನ್ನನ್ನು ಮತ್ತಷ್ಟು ಮೂಕನನ್ನಾಗಿಸುತ್ತಿತ್ತು..

ಹೀಗೆಯೇ ನೆನಪುಗಳೊಡನೆ ಮಾತಾಡಿಕೊಂಡು ಹೋಗುತ್ತಿದ್ದವನು ವಾಸ್ತವಕ್ಕೆ ಬಂದಿದ್ದು ಪ್ರಾರ್ಥನಾ ಶಾಲೇಯ ಮಕ್ಕಳ ಕಲರವ ಕೇಳಿ. ಮಕ್ಕಳ ಮುಗ್ದ ನಗು ನನಗೆ ತುಂಬಾ ಇಷ್ಟ. ಮಕ್ಕಳೊಡನೆ ಇದ್ದಷ್ಟೂ ಹೊತ್ತು ನಾನು ಅವರಲೊಬ್ಬನಾಗುತ್ತೇನೆ. ಶಾಲೆಯಿಂದ ಹೊರ ಬಂದ ಮಕ್ಕಳು ಸಂಭ್ರಮದಿಂದ ತನ್ನ ತನ್ನ ತಂದೆ/ತಾಯಿಯರ ಬಳಿ ಓಡುತ್ತಿತ್ತು. ಅಂದು ಶಾಲೆಯಲ್ಲಿ ನಡೆದ ಘಟನೆಗಳನ್ನೆಲ್ಲಾ ಒಮ್ಮೆಗೇ ಹೇಳಿ ಬಿಡುವ ಆತುರ, ಆಟವಾಡಲು ಕಾತುರ ಹೀಗೆ ಪುಟಿಯುತ್ತಾ ಸಾಗುತ್ತಿದ್ದವು. ಶಾಲಾ ಬಸ್ಸುಗಳು ಸಹಾ ಸಿದ್ದವಾಗಿದ್ದವು. ಮಕ್ಕಳನ್ನು ಅವರ ನಿತ್ಯ ಸಂಭ್ರಮವನ್ನು ನೋಡುತ್ತಾ ನಿಂತಿದ್ದಷ್ಟು ಕಾಲ ಕಳೆದದ್ದೇ ತಿಳಿಯಲಿಲ್ಲ, ಕೈಗೆ ಕಟ್ಟಿದ್ದ ವಾಚ್ ನೋಡಿದರೆ ಸಮಯ ಆಗಲೇ ೦೪೩೦.

ಅಂದು ಸೋಮವಾರವಾದ ಕಾರಣ ಹಾಯ್ ಬೆಂಗಳೂರ್‍ ಕಛೇರಿಗೆ ರಜೆ ಎಂಬ ವಿಷಯ ನನಗೆ ತಿಳಿದಿತ್ತು. ಕಛೇರಿಯ ಒಂದನೇ ಮಹಡಿ ಹತ್ತಿ ಹೊರಟವನಿಗೆ ಮೊದಲು ಕಾಣಿಸಿದ್ದು ಬಿಳಿ ಬಣ್ಣದ ಅಂಗಿಯ ಮುಗ್ದ ಮುಖಭಾವದ ವ್ಯಕ್ತಿಯೊಬ್ಬರು, ನಾ ಬಂದ ಉದ್ದೇಶವನ್ನು ತಿಳಿಸಿದಾಗ ಆತ ಒಳ ಹೋಗಿ ಒಳಗಿದ್ದ ಹೆಂಗಸೊಬ್ಬರಿಗೆ ವಿಷಯವನ್ನು ತಿಳಿಸಿದರು. ನನ್ನ ಕಣ್ಣುಗಳು ಬೆಳಗೆರೆಯವರಿಗಾಗಿ ಆದಷ್ಟು ಒಳಗೆ ತಡಕಾಡುತ್ತಿದ್ದವು. ಒಳಗಿನಿಂದ ಬಂದ ಹೆಂಗಸಿಗೆ ನನ್ನನ್ನು ನಾನು ಪರಿಚಯಿಸಿಕೊಂಡು ಬಂದಿದ್ದ ವಿಷಯ ತಿಳಿಸಿದೆ. ಆಗಲೇ ಗೊತ್ತಾದದ್ದು ಅವರ ಹೆಸರು ಜಯಂತಿ ಎಂದು. ಭೇಟಿಗಾಗಿ ೦೬೦೦ ಗಂಟೆಗೆ ಬರಬೇಕಾಗಿ ತಿಳಿಸಿದರು. ಅಲ್ಲಿಂದ ಹೊರಬಂದ ನನಗೆ ಕಂಪನಿಗಾಗಿ ಕಾದಿತ್ತು…ನನ್ನ ತುಂತುರು ಮಳೆ…ಅದರೊಡನೆಯೇ ಹಿತವಾದ ನೆನೆಪುಗಳು…

ಆಗ ನಾನು ಸರ್ಕಾರಿ ಕಾಲೇಜಿನ ಕಲಾ ವಿಭಾಗದಲ್ಲಿ ಪಿ.ಯು,ಸಿ ಓದುತ್ತಿದ್ದೆ. ಅವಳೋ.. ಸೈನ್ಸ್, ಅಲ್ಲದೇ ಖಾಸಗಿ ಕಾಲೇಜು. ಇದೂ ಸಹಾ ನನ್ನ ಹಿಂಜರಿಕೆಗೆ ಕಾರಣವಾಗಿತ್ತೇನೋ.. ದಿನವೂ ಅವಳ ಹಿಂದೆ ಹೋಗುತ್ತಿದ್ದ ನನಗೆ ಮಾತನಾಡಿಸುವ ಧೈರ್ಯವಾಗುತ್ತಿರಲಿಲ್ಲ. ಮೊದಲೇ ನಾನು ಕನ್ನಡ ಮೀಡಿಯಂ ಇನ್ನು ಅವಳ ಕಾಲೇಜೋ ಸರ್ವವೂ ಇಂಗ್ಲಿಷ್ ಮಯ. ಅವಳೂ ಸಹಾ ಅವಳ ಸ್ನೇಹಿತೆಯರೊಡನೆ ನಿರಾಳವಾಗಿ ಇಂಗ್ಲಿಷ್ ನಲ್ಲಿ ಮಾತಾಡುವುದನ್ನು ಕೇಳಿದ್ದೆ. ನನ್ನ ಜೊತೆಯಲ್ಲಿದ್ದ ನನ್ನ ಹೀರೋ ಸೈಕಲ್ ನೊಡನೆ ಸದ್ದಿಲ್ಲದೇ ಅವಳ ಹಿಂದೆಯೇ ಹೋಗುತ್ತಿದ್ದೆ. ಅಪ್ಪಿ ತಪ್ಪಿ ಅಕಸ್ಮಾತ್ ಅವಳು ನನ್ನೆಡೆಗೆ ನೋಡಿದರೆಂದಳೇ ಮುಗಿಯಿತು, ಅದಕ್ಕಿಂತ ಹರ್ಷ ನನಗೆ ಮತ್ತೊಂದಿಲ್ಲ, ಆ ದಿನ ರಾತ್ರಿಯಿಡೀ ಬರೀ ಹೊರಳಾಟ. ಹೀಗೆ ಕೆಲ ದಿನ ಕಳೆದ ನನಗೆ ನನ್ನ ಸ್ನೇಹಿತರು ತುಂಬಿದ ಧೈರ್ಯವೋ ಅಥವಾ ಅಂದಿಗೇ ಬೆಳಗೆರೆಯವರ ಬರಹಗಳನ್ನು ಓದುತ್ತಿದ್ದ ನನಗೆ ನನ್ನ ಮೇಲೆ ಬಂದ ನಂಬಿಕೆಯೋ ತಿಳಿಯದು, ಕೊನೆಗೂ ಅವಳನ್ನು ಮಾತನಾಡಿಸುವ ನಿರ್ಧಾರಕ್ಕೆ ಬಂದೆ. ಆಗಲೇ ಉಗಮವಾದ ಪ್ರಶ್ನೆಗಳು ನೂರೆಂಟು  ಏನು ಮಾತಾಡಲಿ? ಎಲ್ಲಿ ಮಾತಾಡಲಿ ? ಹೇಗೆ ಮಾತು ಪ್ರಾರಂಭಿಸಲಿ ಹೀಗೆಯೇ.. ಕಡೆಗೂ ನೋಟ್ಸ್ ಸಿದ್ದವಾಯಿತು. ಮಾತುಗಳನ್ನು ಪೋಣಿಸಿ ಅದಕ್ಕಾಗಿ ಸಿದ್ದಗೊಂಡವನಿಗೆ ಮುಂದಿನ ವಾರವೇ ಇದ್ದ ಅರ್ದವಾರ್ಷಿಕ ಪರೀಕ್ಷೆಯೆಡೆಗೆ ಗಮನವೆಲ್ಲಿಯದೋ ? ಮರುದಿನವೇ ಸಂಜೆ ೦೪೦೦ ಕ್ಕೆ ಆ ಹುಡುಗಿ ಟ್ಯೂಷನ್ ಹೋಗುವ ಸಮಯಕ್ಕೆ ಮುಂಚೆಯೇ ನನ್ನ ಹೀರೋ ಸೈಕಲನ್ನು ಒರೆಸಿಟ್ಟುಕೊಂಡು ಕೆಲ ದಿನಗಳ ಹಿಂದೆಯಷ್ಟೇ ನನ್ನ ತಂದೆ ಕೊಡಿಸಿದ್ದ ಟೀ ಷರ್ಟ್ ಹಾಗೂ ಜೀನ್ಸ್ ಹಾಕಿ ತಯಾರಾದೆ….

ಹೀಗೆ ಎಡ ಬಿಡದೇ ಬರುತ್ತಿದ್ದ ಹಳೇ ನೆನಪುಗಳಿಗೆ ಸ್ವಲ್ಪ ವಿರಾಮ ನೀಡಿ ಕೈಗೆ ಕಟ್ಟಿದ್ದ ವಾಚಿನೆಡೆಗೆ ನೋಡಿದರೆ ಆಗಲೇ ಸಮಯ ೦೬೦೦ ರ ಸಮೀಪಿಸುತ್ತಿತ್ತು. ಮಳೆ ಗುಡ್ ಬೈ ಹೇಳತೊಡಗಿತ್ತು. ಜೇಬಿನಲ್ಲಿದ್ದ ಮೊಬೈಲ್ ತೆಗೆದು ಬೆಳಗೆರೆಯವರಿಗೆ ಫೋನಾಯಿಸಿದೆ. ಬೆಳಗೆರೆಯವರೇ ರಿಸೀವ್ ಮಾಡಿದರು. ಅವರದು ಎಂದಿನಂತೆ ಆತ್ಮೀಯತೆಯ ಮಾತು. ಭಾಸ್ಕರ್‍ ಎಂದೊಡನೆಯೇ ಅವರಿಗೆ ನಾನು ನೆನಪು ಬಂದಿದ್ದು ನನಗೆ ಖುಷಿ ತಂದಿತ್ತು. “ಅಣ್ಣಾ ನಾನು ತಮ್ಮ ಕಛೇರಿಯ ಮುಂದಿದ್ದೇನೆ” ಎಂದು ಹೇಳಿದೆ. ತಕ್ಷಣವೇ ಮೇಲೆ ಬರಲು ಸೂಚಿಸಿದ ಅವರು ತಮ್ಮ ಸಹಾಯಕರಿಗೆ ನನ್ನನ್ನು ಕರೆಯಲು ಹೇಳಿದ್ದು ಫೋನಿನಲ್ಲಿ ಕೇಳಿಸಿಕೊಂಡು ಮೇಲೆ ಹೊರಟೆ.

ಕಛೇರಿಯಲ್ಲಿದ್ದವರು ಕೆಲವರೇ ಆದರೂ ಪ್ರತಿಯೊಬ್ಬರಲ್ಲೂ ಒಂದು ಶಿಸ್ತಿನ ಮೌನ. ಒಳಗಿನಿಂದ ಬೆಳಗೆರೆಯವರ ದ್ವನಿ ಕಂಡು ಕುಳಿತಲ್ಲೇ ಉಲ್ಲಸಿತನಾಗುತ್ತಿದ್ದೆ. ಕೆಲ ನಿಮಿಷ ಕಾದ ಬಳಿಕ ಅಂತೂ ಆ ಗಳಿಗೆ ಸಮೀಪಿಸಿತು. ಒಳಗಿನಿಂದ ಬಂದ ಜಯಂತಿ ರವರು ಬಾಸ್ ಕರೆಯುತ್ತಿದ್ದಾರೆ ಎಂದೊಡನೇ ಒಳ ಹೋದೆ. ತಮ್ಮ ಕಛೇರಿಯ ಮಧ್ಯದಲ್ಲೇ ಶಾಂತವಾಗಿ ಏನನ್ನೋ ಬರೆಯುತ್ತಿದ್ದ ಬೆಳಗೆರೆಯವರನ್ನು ಕಂಡು ನಿಂತಲ್ಲೇ ನಿಂತೆ, ಹಾಗೆಯೇ ಅಲ್ಲಿಯೇ ನಿಂತು ನೋಡುತ್ತಿದ್ದವನೆಡೆಗೆ ಬೆಳಗೆರೆಯವರು ನೋಡಿ ಆತ್ಮೀಯ ಮುಗುಳ್ನಗೆಯೊಂದಿಗೆ ಬರಮಾಡಿಕೊಂಡರು. ನನ್ನ ಮೈಯಲ್ಲೆಲ್ಲಾ ಮಿಂಚಿನ ಸಂಚಾರ. ಅವರ ಸರಳತೆ ನನ್ನನ್ನು ಮೂಕನನ್ನಾಗಿಸಿತ್ತು. ಅವರೊಡನೆ ಕಳೆದ ಈ ೧೫ ನಿಮಿಷಗಳು ನಾನು ಎಂದಿಗೂ ಮರೆಯಲಾಗದ ಕ್ಷಣಗಳು. ಹಾಯ್ ಬೆಂಗಳೂರ್‍, ಓ ಮನಸೇ, ಇಂಟರ್‍ ನೆಟ್, ಬ್ಲಾಗ್, ಹೀಗೆಯೇ ಕೆಲವಾರು ವಿಷಯ ಬಗ್ಗೆ ಮಾತನಾಡಿ ಅವರೊಡನೆ ಒಂದು ಫೊಟೋ ತೆಗೆಸಿಕೊಂಡು, ಅವರು ಉಡುಗೊರೆಯಾಗಿ ನೀಡಿದ ಪುಸ್ತಕವನ್ನು ಪಡೆದುಕೊಂಡು ವಿಧಾಯ ಹೇಳಿ ಕಛೇರಿಯ ಮೆಟ್ಟಿಲಿಳಿಯುತ್ತಿದ್ದಂತೇ ಕಣ್ತುಂಬಿ ಬಂದಿತ್ತು. ಮನಸ್ಸು ಅವರ ಸರಳ ವ್ಯಕ್ತಿತ್ವಕ್ಕೆ ಒಳಗೊಳಗೇ ಪ್ರಣಾಮಗಳನ್ನು ಸಲ್ಲಿಸುತ್ತಿತ್ತು.

ಕಛೇರಿಯಿಂದ ಹೊರ ಬಂದು ಮೆಜೆಸ್ಟಿಕ್ ಗೆ ಹೋಗುವ ಬಿ.ಟಿ.ಎಸ್ ಬಸ್ಸೇರಿ ಕುಳೀತಿದ್ದವನ ಕೈಯಲ್ಲಿ ಬೆಳಗೆರೆಯವರು ಉಡುಗೆರೆಯಾಗಿ ನೀಡಿದ ಪುಸ್ತಕ ಭದ್ರವಾಗಿ ಕುಳಿತಿತ್ತು. ತೆರೆದು ನೋಡಿದ ಕೂಡಲೇ ಕಣ್ಣಿಂದ ಜಾರಿ ಬಿದ್ದ ಹನಿಯೊಂದು ಅಲ್ಲೇ ಬಿದ್ದು ಮಾಯವಾಗಿತ್ತು. ಪುಸ್ತಕದ ಮೊದಲ ಪುಟದಲ್ಲಿ ಬೆಳಗೆರೆಯವರೇ ಸ್ವತಃ ಬರೆದ ಅಕ್ಷರಗಳು ನನ್ನನ್ನು ಸಂಪೂರ್ಣವಾಗಿ ಆವರಿಸಿದ್ದವು.

ಬೆಳಗೆರೆಯವರ ಕೈ ಬರಹ

ಬೆಳಗೆರೆಯವರ ಕೈ ಬರಹ

“ಒಲವಿನ ತಮ್ಮ ಭಾಸ್ಕರ್‍ಗೆ, ಅಕ್ಕರೆಯಿಂದ”-ಸಹಿ, ರವಿ ಬೆಳಗೆರೆ.

-ಭಾಸ್ಕರ್‍.


ನೆನಪಿರಲಿ: ಒಳ್ಳೆಯತನ ಕೂಡ ಪ್ರೇಮದಂತೆಯೇ ಭಾಸವಾಗುತ್ತದೆ…

July 21, 2009

Loveforever

ಮೇಡ್ ಫಾರ್‍ ಈಚ್ ಅದರ್‍.

ಕೆಲವು ಜೋಡಿಗಳು ನಿಜಕ್ಕೂ ಹಾಗಿರುತ್ತವೆ. ಅವರು ಸುಳ್ಳೇ ರೇಗುವುದಿಲ್ಲ. ಜೋರಾಗಿ ಮಾತಾಡುವುದಿಲ್ಲ. ಹತ್ತು  ಮಂದಿ ಕೆಟ್ಟ ಕುತೂಹಲದಿಂದ  ನೋಡುವಂತೆ ವರ್ತಿಸುವುದಿಲ್ಲ. ತಮ್ಮ ಗೆಳೆತನವನ್ನು ಮನೆಮಂದಿಯವರಿಂದ, ಗೆಳೆಯರಿಂದ ಮುಚ್ಚಿಟ್ಟಿರುವುದೂ ಇಲ್ಲ. ಅವನು ಅವಳಿಗೋಸ್ಕರ ಎಂದು ಬದುಕುತ್ತಿರುತ್ತಾನೆ. ಅವಳನ್ನು ಮೆಚ್ಚಿಸಲಿಕ್ಕೆಂದೇ ಓದುತ್ತಿರುತ್ತಾನೆ. ಅವಳಿಗಿಷ್ಟ ಎಂಬ ಕಾರಟಕ್ಕೇ ಸಾಲ ಮಾಡಿ ಬೈಕು ಖರೀದಿಸಿರುತ್ತಾನೆ. ಅವಳಿಗೆ ಇಷ್ಟವಾಗೋದಿಲ್ಲ ಎಂಬ ಕಾರಣದಿಂದಲೇ  ಸಿಗರೇಟು ಬಿಟ್ಟಿರುತ್ತಾನೆ. ಶಿಸ್ತಿನ ಜೀವನಕ್ಕೆ ಒಗ್ಗಿಕೊಂಡಿರುತ್ತಾನೆ. ಅವಳು ಮಾತಿನ ಮಧ್ಯೆ- ’ಮದುವೆಯಾದ ಎರಡೇ ವರ್ಷದಲ್ಲಿ ಮನೆ ಕಟ್ಟಿಸಿ ಬಿಡೋಣ ’ಅಂದರೆ, ಪ್ಯಾದೆಯಂತೆ ಅದಕ್ಕೂ ಒಪ್ಪಿರುತ್ತಾನೆ. ಭೂಪ ಅಷ್ಟಕ್ಕೇ  ಸುಮ್ಮನಾಗದೆ, ಹತ್ತು ಮಂದಿಯ ಮುಂದೆ ತನ್ನ ಪ್ರೇಮಾಯಣದ ಕಥೆಯನ್ನು ಹೇಳಿಕೊಂಡಿರುತ್ತಾನೆ. ನಾವಿಬ್ರೂ ಒಟ್ಟಿಗೇ ದೇವಸ್ಥಾನಕ್ಕೆ ಹೋಗಿ ಬಂದಿದೀವಿ ಕಣ್ರೋ. ಅವಳ ಹಣೇಗೆ ನಾನು  ಕುಂಕುಮ  ಇಟ್ಟೀದಿನಿ. ಅಂದ ಮೇಲೆ ನಮ್ದು ಮದುವೆ ಆಗೇ ಹೋಯ್ತು ಎಂದರ್ಧ ಎಂದೂ ಕೊಚ್ಚಿಕೊಂಡಿರುತ್ತಾನೆ.

ಈ ಕಡೆ ಹುಡುಗಿಯಾದರೂ ಅಷ್ಟೆ: ಅವಳಿಗೂ ಅವನೇ ಪ್ರಪಂಚ. ಅವನಿಲ್ಲದ ಬದುಕನ್ನು ಅವಳು ಕನಸಲ್ಲೂ ಕಲ್ಪಿಸಿಕೊಂಡವಳಲ್ಲ. ಬದುಕು ಅನ್ನೋದಿದ್ರೆ ಅವನ ಜೊತೇಲಿ. ಅವನು ದುಡಿದ್ರೂ ಸೈ. ಒಂದು ವೇಳೆ ಆತ ದುಡಿಮೆಗೆ ಹೋಗಲಿಲ್ಲ ಅಂದ್ರೆ ನಾನೇ ದುಡಿತೇನೆ. ಗಂಡ ಅನ್ನಿಸಿಕೊಂಡವನನ್ನು ಸಾಕಿದ್ರೆ ತಪ್ಪೇನು ಎಂದೂ ಮಾತಾಡುತ್ತಾಳೆ. ಮದುವೆಯ ನಂತರದ ಬದುಕಿನ ಬಗ್ಗೆ ಹತ್ತು ಮಂದಿಯ ಗೆಳತಿಯರೊಂದಿಗೆ ಹೇಳಿಕೊಂಡು ಖುಷಿಪಟ್ಟಿರುತ್ತಾಳೆ.

ಆದರೆ, ಯಾವುದೋ ಒಂದು ಕ್ಷುಲ್ಲಕ ಕಾರಣಕ್ಕೆ ಆ ಮಧುರ ಸಂಬಂಧ ಕಿತ್ತು ಹೋಗುತ್ತದೆ. ಪ್ರೇಮ ರದ್ದಾಗುತ್ತದೆ. ಆಟ ಕೊನೆಯಾಗುತ್ತದೆ. ಮಾತು ನಿಂತುಹೋಗುತ್ತದೆ. ಅದುವರೆಗೂ ಪ್ರತಿ ದಿನ ಬೆಳೆಗ್ಗೆ ಮತ್ತು ಸಂಜೆ ಪಾರ್ಕಿನ ಹೊರಗೆ ಮೂಲೆಯೊಂದರಲ್ಲಿ  ಸ್ಕೂಟಿ ನಿಲ್ಲಿಸಿಕೊಂಡು ಹರಟೆಗೆ ಸಿಗುತ್ತಿದ್ದ ಹುಡುಗಿ: ಹುಡುಗನ ಕೈ ಬೆರಳುಗಳೊಂದಿಗೆ ಆಟವಾಡುತ್ತಿದ್ದ ಹುಡುಗಿ ದಿಢೀರನೆ ವರಸೆ ಬದಲಿಸುತ್ತಾಳೆ. ಅದೇ ದಾರಿಯಲ್ಲಿ ಕಾದು ನಿಂತ ಹುಡುಗನತ್ತ ತಿರುಗಿ ಕೂಡ ನೋಡದೆ ಎಕ್ಸ್ ಪ್ರೆಸ್ ವೇಗದಲ್ಲಿ ಸ್ಕೂಟಿ ಓಡಿಸುತ್ತಾಳೆ. ಸ್ವಲ್ಪ ಬುದ್ಧಿವಂತೆಯಾಗಿದ್ದರೆ, ಸೀದಾ ಹುಡುಗನ ಬಳಿ ಬಂದು, ಕೈ ಮುಗಿದು, ನಂಗೆ ಯಾಕೋ ಈ ಸಂಬಂಧ ಇಷ್ಟವಾಗ್ತಾ ಇಲ್ಲ. ಹಾಗಾಗಿ ಎದ್ದು ಹೋಗ್ತಾ ಇದೀನಿ. ತಪ್ಪು ತಿಳ್ಕೋಬೇಡ. ಬೇಸರ ಮಾಡ್ಕೋಬೇಡ. ಖುಷಿಯಾಗಿರು. ನೆಮ್ಮದಿಯಾಗಿರು. ಬದುಕಲ್ಲಿ ಮಹತ್ವದನ್ನು ಸಾಧಿಸು. ನಾನು ಅದನ್ನು ದೂರದಿಂದ್ಲೇ ನೋಡಿ ಖುಷಿ ಪಡ್ತೀನಿ’ ಎಂದು ವೇದಾಂತದ ಮಾತಾಡಿ ಹೋಗಿ ಬಿಡುತ್ತಾಳೆ.

ಹೀಗೆ, ಬೇಡ ಅನ್ನಿಸಿದ ಸಂಬಂಧಗಳನ್ನು ದೂರಾಮಾಡಿಕೊಳ್ಳುವುದರಲ್ಲಿ ಹುಡುಗರೇನೂ ಕಡಿಮೆ ಇಲ್ಲ. ಒಂದು ಕಾಲದಲ್ಲಿ ನೀನಿಲ್ಲ ಅಂದ್ರೆ ಸತ್ತೇ ಹೋಗ್ತೀನಿ ಅನ್ನುತ್ತಿದ್ದ ಹುಡುಗನೇ- ’ಮನೇಲಿ ಕಷ್ಟ ಇದೆ. ತಂಗಿಗೆ ಮದುವೆಯಾಗಿಲ್ಲ. ಅಪ್ಪ ಹಾರ್ಟ್ ಪೇಷೆಂಟು. ನಮ್ಮಮ್ಮ ನಿನಗೆ ಹೊಂದಿಕೆಯಾಗಲ್ಲ. ಹಾಗಾಗಿ ನಾವು ದೂರ ಆಗೋಣ’ ಎಂದೇ ಬಿಡುತ್ತಾರೆ.

ಹೀಗೆ, ಬದುಕೆಂದರೆ ಇಷ್ಟೇ ಎಂದು ಭಾವಿಸಿರುತ್ತೇವಲ್ಲ? ಅದು ಕೈ ತಪ್ಪಿ ಹೋದಾಗ ಆಗುವ ನೋವನ್ನು ಭರಿಸುವುದು ಕಷ್ಟ-ಕಷ್ಟ ಅಂದಿರುತ್ತಾರೆ. ದೇವಸ್ಥಾನಕ್ಕೆ ಕರೆದೊಯ್ದು ಅರ್ಚನೆ ಮಾಡಿಸಿರುತ್ತಾರೆ. ಕುಟುಂಬದ ಗ್ರೂಫ್ ಫೋಟೋ ಸೆಷನ್ ನಲ್ಲಿ ಒತ್ತಿಕೊಂಡು ನಿಂತಿರುತ್ತಾರೆ ಮತ್ತು ಮೇಲಿಂದ ಮೇಲೆ ಕಣ್ಣು ಹೊಡೆದಿರುತ್ತಾರೆ.

ಉಹುಂ, ಅಲ್ಲಿ ಆಸೆಯಿರುವುದಿಲ್ಲ. ’ಐ ಲವ್ ಯೂ’ ಎಂಬಂಥ ಭಾವವಿರುವುದಿಲ್ಲ. ಬದಲಿಗೆ ಅಲ್ಲಿ ಶುದ್ದ ಸ್ನೇಹವಿರುತ್ತದೆ. ಗೆಳೆತನವಿರುತ್ತದೆ. ಒಡಹುಟ್ಟಿದವರಿಂದ ಬಯಸುವಂಥ ಮಮತೆಯಿರುತ್ತದೆ.

ಆದರೆ ಹೆಚ್ಚಿನ ಸಂದರ್ಭಗಳಲ್ಲಿ ಮುಕ್ತವಾಗಿ ಮಾತಾಡುವುದನ್ನು, ನೀನಿಲ್ಲದಿದ್ರೆ ತುಂಬಾ ಹಿಂಸೆ ಅನಿಸುತ್ತೆ ಎಂಬ ಆರ್ದ್ರತೆಯನ್ನು ತುಂಬ ಜನ ತಪ್ಪಾಗಿಯೇ ಅರ್ಥ ಮಾಡಿಕೊಳ್ಳುತ್ತಾರೆ. ನಂತರ ಮೊದಲೇ ನಿರ್ಧರಿಸಿದವರಂತೆ ಅದೊಂದು ದಿನ ಹೋಗಿ ಒಗರೊಗರು, ಒರಟೊರಟು ದನಿಯಲ್ಲಿ ’ಐ ಲವ್ ಯೂ’ ಅಂದುಬಿಡುತ್ತಾರೆ.

ಪರಿಣಾಮ, ಒಂದು ಮಧುರವಾದ ಸಂಬಂಧ ವಿನಾಕಾರಣ ಸತ್ತು ಹೋಗುತ್ತದೆ. ಆ ನಂತರದ ಯಾತನೆ ಬಿಡಿ , ಅದು ಬದುಕಿಡೀ ನಮ್ಮ ಜೊತೆಗೇ ಇರುತ್ತದೆ, ತೋಳ ಮೇಲಿನ ಮಚ್ಚೆಯಂತೆ!

ಇಂಥ ಯಡವಟ್ಟಿನ ಕೈಗೆ ಬುದ್ದಿ ಕೊಡದೇ ಬದುಕುವುದಿದೆಯಲ್ಲ-ಅದೇ ಜೀವನ Try that.

-ಬೆಳಗೆರೆ